ಮೈಸೂರು: ಹೆಲಿಕಾಪ್ಟರ್ ಮೂಲಕ ಬಂದ 12 ಮಂದಿ ಸಮರ ಯೋಧರು ಕೇವಲ 10 ನಿಮಿಷಗಳಲ್ಲೇ ಇಡೀ ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡರು. ಪ್ರತಿದಾಳಿಗೆ ಅವಕಾಶವಿಲ್ಲದಂತೆ ಎದುರಾಳಿಗಳನ್ನು ಸದೆಬಡಿದರು. ಬರೋಬ್ಬರಿ 8 ಸಾವಿರ ಅಡಿ ಎತ್ತರದಿಂದ ಜಿಗಿದ ‘ಆಕಾಶಗಂಗಾ’ ತಂಡದ ಯೋಧರ ಸಾಹಸ ಮೈನವಿರೇಳಿಸಿತು. ಭಾರತೀಯ ಯೋಧರ ಶೌರ್ಯ, ಕೌಶಲಕ್ಕೆ ಸಭಿಕರು ಮಂತ್ರಮುಗ್ಧರಾದರು. ವೀಕ್ಷಕರ ಕರತಾಡನದ ಮೊರೆತ ಮೈದಾನದಲ್ಲಿ ಮಾರ್ದನಿಸಿತು.
ದಸರಾ ಮಹೋತ್ಸವದ ಪ್ರಯುಕ್ತ ಇಲ್ಲಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ವೈಮಾನಿಕ ಪ್ರದರ್ಶನದಲ್ಲಿ ಕಂಡ ದೃಶ್ಯಕಾವ್ಯವಿದು.
ನಿರ್ದಿಷ್ಟ ದಾಳಿ: ಸಾರ್ಜನ್ ಗೌರವ್ ನೇತೃತ್ವದ ‘ಗರುಡ’ ಕಮಾಂಡೊ ತಂಡವು ‘ಏರ್ ಡೆವಿಲ್’ ಹೆಲಿಕಾಪ್ಟರ್ ಮೂಲಕ ‘ನಿರ್ದಿಷ್ಟ ದಾಳಿ’ (ಸರ್ಜಿಕಲ್ ಸ್ಟ್ರೈಕ್) ನಡೆಸಿತು. 50 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್ನಲ್ಲಿ 15 ಯೋಧರಿದ್ದರು. 12 ಯೋಧರು ಹಗ್ಗದ ಸಹಾಯದಿಂದ ಸರಸರನೆ ಕೆಳಗಿಳಿದು ಅಣಕು ಯುದ್ಧವನ್ನು ಪ್ರದರ್ಶಿಸಿದರು.
ಆಗಸದಲ್ಲಿ ತ್ರಿವರ್ಣಧ್ವಜ ಪ್ರದರ್ಶಿಸಿದ ಯೋಧರ ಸಾಹಸ.
‘ಆಕಾಶಗಂಗಾ’ ತಂಡದ ಒಂಬತ್ತು ಯೋಧರು ಆಗಸದಲ್ಲಿ ನೀಡಿದ ಸಾಹಸ ಪ್ರದರ್ಶನ ಮೈನವಿರೇಳಿಸಿತು. ಪ್ಯಾರಾಚ್ಯೂಟ್ ಧರಿಸಿದ್ದ ಯೋಧರು 8 ಸಾವಿರ ಅಡಿ ಎತ್ತರದಲ್ಲಿ ಹೆಲಿಕಾಪ್ಟರ್ನಿಂದ ಧರೆಗೆ ಜಿಗಿದರು. ತ್ರಿವರ್ಣ ಧ್ವಜ ಪ್ರದರ್ಶನವು ಸಭಿಕರ ಮನಸೂರೆಗೊಳ್ಳುವಂತೆ ಮಾಡಿತು.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡ ಯೋಧರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್, ಅನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಪಾಲ್ಗೊಂಡಿದ್ದರು.