ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದಂದು ಕೋವಿಡ್ ಕಾರಣಕ್ಕಾಗಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ, ಬಹಳಷ್ಟು ಮಂದಿ ಭಕ್ತರು ಬೆಟ್ಟದ ಪಾದದಲ್ಲೇ ದೇವರಿಗೆ ನಮಿಸಿ ಹೊರಟರು. ಆದರೆ, ಸರ್ಕಾರದಿಂದ ಶಿಷ್ಟಾಚಾರ ಪಾಲನೆ ಮಾಡಲಾಗುವ ವ್ಯಕ್ತಿಗಳು ಹಾಗೂ ಅವರೊಂದಿಗೆ ಹಲವು ಮಂದಿ ದೇಗುಲ ಪ್ರವೇಶಿಸಿದರು.
ಉತ್ತನಹಳ್ಳಿ, ತಾವರೆಕಟ್ಟೆ ಹಾಗೂ ಮೆಟ್ಟಿಲುಗಳ ಬಳಿ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು. ಸಾಮಾನ್ಯ ಜನರನ್ನು ಇಲ್ಲಿ ಪೊಲೀಸರು ಬಿಡಲಿಲ್ಲ. ಮೆಟ್ಟಿಲುಗಳ ಬಳಿಯೇ ಕರ್ಪೂರ ಹಚ್ಚಿ, ಕೈಮುಗಿದ ಭಕ್ತರು ಮನೆಯತ್ತ ಸಾಗಿದರು.
ಆದರೆ, ಶಾಸಕರಾದ ಎಸ್.ಎ.ರಾಮದಾಸ್, ಸಚಿವರಾದ ಬೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ಮಂದಿ ಜನಪ್ರತಿನಿಧಿಗಳು ದೇಗುಲ ಪ್ರವೇಶಿಸಿದರು. ನಟ ದರ್ಶನ್ ಅವರೂ ದೇಗುಲಕ್ಕೆ ಬರುತ್ತಾರೆ ಎಂಬ ಊಹಾಪೋಹಾಗಳು ಹರಡಿದ್ದವು. ಆದರೆ, ಅವರು ದೇಗುಲಕ್ಕೆ ಬರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.