ಪಿರಿಯಾಪಟ್ಟಣ (ಮೈಸೂರು): ಕ್ಷೌರಿಕ ವೃತ್ತಿ ನಡೆಸುತ್ತಿದ್ದ, ತಾಲ್ಲೂಕಿನ ಪಂಚವಳ್ಳಿ ಗ್ರಾಮದ ಯೋಗೇಶ್ (28) ಎಂಬುವವರು ಕಲ್ಲು ಕ್ವಾರಿಯ ಗುಂಡಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದಲ್ಲಿ ಸಲೂನ್ ನಡೆಸುತ್ತಿದ್ದ ಅವರು, ಖಾಸಗಿ ಹಣಕಾಸು ಸಂಸ್ಥೆಗಳಿಂದ ಹಾಗೂ ಹಲವರಿಂದ ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲ ತೀರಿಸಲು ಆಗದೇ ನೊಂದಿದ್ದ ಅವರು, ಗುರುವಾರ ಸಂಜೆ ಪಂಚವಳ್ಳಿ ಗ್ರಾಮದ ಖಾಸಗಿ ಜಮೀನಿನಲ್ಲಿರುವ ಕಲ್ಲು ಕ್ವಾರಿಯ ಹಳ್ಳಕ್ಕೆ ನೆಗೆದಿದ್ದಾರೆ.
ವಿಷಯ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಗುರುವಾರ ತಡರಾತ್ರಿಯವರೆಗೂ ಕ್ವಾರಿಯಲ್ಲಿ ಹುಡುಕಾಟ ನಡೆಸಿದ್ದರು. ಶುಕ್ರವಾರ ಮುಂಜಾನೆ ಮುಳುಗು ತಜ್ಞರು ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.
ಮೃತನ ಅಣ್ಣ ಮಲ್ಲೇಶ್, ಪಿರಿಯಾಪಟ್ಟಣ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.