ಮೈಸೂರು: ಮೈಸೂರು ಹೊರವಲಯದ ಮಂಡಕಳ್ಳಿಯಲ್ಲಿರುವ ಕೆಎಸ್ಒಯು ಅಕಾಡೆಮಿಕ್ ಕಟ್ಟಡದಲ್ಲಿ 600 ಹಾಸಿಗೆ ವ್ಯವಸ್ಥೆ ಮಾಡಿದ ಬೆನ್ನಲ್ಲೇ, ಚಾಮುಂಡಿ ವಿಹಾರದ ಒಳಾಂಗಣ ಕ್ರೀಡಾಂಗಣದಲ್ಲಿ ‘ಕೋವಿಡ್ ಕೇರ್ ಕೇಂದ್ರ’ ಸ್ಥಾಪಿಸಲು ಸಿದ್ಧತೆ ನಡೆದಿದೆ.
ಒಳಾಂಗಣ ಕ್ರೀಡಾಂಗಣದಲ್ಲಿ ಸುಮಾರು 800 ಹಾಸಿಗೆಗಳ ಸೌಲಭ್ಯ ಕಲ್ಪಿಸುವ ಚಿಂತನೆಯಲ್ಲಿ ಜಿಲ್ಲಾಡಳಿತವಿದೆ. ರೋಗ ಲಕ್ಷಣವಿಲ್ಲದವರಿಗೆ ಈ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಕಾರಣ ಮುನ್ನೆಚ್ಚರಿಕೆಯಾಗಿ ಈ ಕ್ರಮ ಕೈಗೊಂಡಿದೆ.
ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ, ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ನರ್ಸ್ಗಳು ತಂಗಲೂ ಇಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.
‘ಕೋವಿಡ್ ಕೇರ್ ಕೇಂದ್ರವಾಗಿ ಚಾಮುಂಡಿ ವಿಹಾರದ ಒಳಾಂಗಣ ಕ್ರೀಡಾಂಗಣವನ್ನು ಪರಿವರ್ತಿಸಲಾಗುತ್ತಿದೆ. ಆರು ದಿನಗಳಲ್ಲಿ ಸಿದ್ಧಪಡಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ’ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸದ್ಯ ಜಿಲ್ಲೆಯಲ್ಲಿ ಸುಮಾರು 3,500 ಹಾಸಿಗೆಗಳ ಸೌಲಭ್ಯವಿದೆ.