ಮೈಸೂರು: ದ್ವಿಚಕ್ರ ವಾಹನ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಅಶೋಕಪುರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಹುಣಸೂರು ಪಟ್ಟಣದ ಪ್ರಸನ್ನ (24) ಎಂಬಾತನೇ ಬಂಧಿತ ಆರೋಪಿ.
ಅಂದಾಜು 3.7 ಲಕ್ಷ ಮೌಲ್ಯದ 3 ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನ ಹಾಗೂ ವಿವಿಧ ಕಂಪನಿಯ 10 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
‘ಈ ವ್ಯಕ್ತಿಯು ಜಯನಗರ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಮಾಸ್ಕ್ ಹಾಕದೆ ಬಿಳಿ ಬಣ್ಣದ ಹೋಂಡಾ ಆಕ್ಟೀವಾ ಸ್ಕೂಟರ್ನಲ್ಲಿ ಬರುತ್ತಿದ್ದ. ಗಸ್ತಿನಲ್ಲಿದ್ದ ಸಿಬ್ಬಂದಿಯು ಸ್ಕೂಟರ್ ನಿಲ್ಲಿಸುವಂತೆ ಹೇಳಿದರೂ ಆತ ತಿರುವು ಪಡೆದುಕೊಂಡು ವೇಗವಾಗಿ ಹೊರಟ. ಹಿಂಬಾಲಿಸಿ ಹಿಡಿದು
ವಿಚಾರ ಮಾಡಿದಾಗ ಕಳ್ಳತನ ಮಾಡಿರುವುದು ಬಯಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಅಶೋಕಪುರಂ, ಸರಸ್ವತಿಪುರಂ ಹಾಗೂ ಕೃಷ್ಣರಾಜ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದಾಗಿ ಹಾಗೂ ಅಶೋಕಪುರಂ, ಶ್ರೀರಾಂಪುರ, ಅರವಿಂದನಗರ, ಕೆ.ಜಿ ಕೊಪ್ಪಲು ಮತ್ತು ಕುವೆಂಪುನಗರದ ಮನೆಗಳಲ್ಲಿ ಕಿಟಕಿಯ ಮೂಲಕ
ಕೈಹಾಕಿ ರಾತ್ರಿ ವೇಳೆ ಮೊಬೈ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿರುತ್ತಾನೆ’ ಎಂದಿದ್ದಾರೆ.
ಪತ್ತೆ ಕಾರ್ಯವನ್ನು ಡಿಸಿಪಿ ಗೀತಾ ಪ್ರಸನ್ನ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ ಅಶೋಕಪುರಂ
ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿ.ಎಸ್.ಪ್ರಕಾಶ್ ಹಾಗೂ ಸಿಬ್ಬಂದಿ ಮಾಡಿರುತ್ತಾರೆ.
ಗಾಂಜಾ ಮಾರಾಟ ನಾಲ್ವರ ಬಂಧನ
ಮೈಸೂರು: ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 8 ಕೆ.ಜಿ.
650 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ನಗರದ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಂದಿನಿ ಬಡಾವಣೆಯ 2ನೇ ಕ್ರಾಸ್ನಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಆರೋಪಿಗಳಾದ ಕೊಳ್ಳೇಗಾಲ ತಾಲ್ಲೂಕಿನ ಶ್ರೀನಿವಾಸ ಆಲಿಯಾಸ್ ಶೀನಾ (50 ವರ್ಷ), ಮೈಸೂರಿನ ಭಾರತ್ ನಗರದ ಲಿಯಾಕುತ್ವುಲ್ಲಾ (28), ವಾಸಿಂ ಅಕ್ರಂ (28) ಹಾಗೂ ನವೀದ್ ಪಾಷ (28) ಎಂಬುವವರನ್ನು ಬಂಧಿಸಿದ್ದಾರೆ.
‘ಶ್ರೀನಿವಾಸ ಮತ್ತು ನವೀದ್ ಪಾಷ ಗಾಂಜಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ವಿಚಾರಣೆ ವೇಳೆ ತಿಳಿದಿರುತ್ತದೆ. ವಾಸಿಂ ಅಕ್ರಂ ಈ ಹಿಂದೆ ದ್ವಿಚಕ್ರ ವಾಹನಗಳ ಕಳವು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದಾಳಿ ಕಾರ್ಯವನ್ನು ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಎಸಿಪಿ ವಿ.ಮರಿಯಪ್ಪ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಲೋಲಾಕ್ಷಿ ಹಾಗೂ ಸಿಬ್ಬಂದಿ ನಡೆಸಿರುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.