ಮೈಸೂರು: ಪತ್ರಕರ್ತ ಮಹಮ್ಮದ್ ಸಫ್ಜರ್ ಕೈಸರ್ ಮೇಲೆ ನಡೆದ ಹಲ್ಲೆ ಪ್ರಕರಣಗಳ ಆರೋಪಿಗಳನ್ನು ಒಂದು ವಾರದಲ್ಲಿ ಬಂಧಿಸಬೇಕು ಹಾಗೂ ಇಂತಹ ಘಟನೆ ಮತ್ತೆ ಮರುಕಳಿಸದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಮೀಯತೆ ಉಲೆಮಾ ಎ ಹಿಂದ್ ನೇತೃತ್ವದ ಸಭೆಯು ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು ನೀಡಿತು.
ಉದಯಗಿರಿಯ ಸಫಾ ಫಂಕ್ಷನ್ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ 10ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಿದ್ದವು. ಸುಮಾರು 150ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಎಲ್ಲರೂ ಘಟನೆಯನ್ನು ಬಲವಾಗಿ ಖಂಡಿಸಿದರು.
ಗುರುತಿನ ಚೀಟಿ ತೋರಿಸಬೇಕು ಎಂಬುದು ನೆಪಮಾತ್ರ. ಉರ್ದು ಮಾತನಾಡಿದರು ಎಂಬ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದವು. ಈ ವಿಷಯವನ್ನು ಶಾಸಕ ತನ್ವೀರ್ಸೇಠ್ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಬೇಕು ಎಂದು ಆಗ್ರಹಿಸಲಾಯಿತು.
ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಶಾಂತಿ ಸಭೆ: ಹಿಂದೂ ಜಾಗರಣ ವೇದಿಕೆಯ ಪ್ರತಿಭಟನಾ ಸಭೆಯ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ‘ದಿ ಡೈಲಿ ಕೌಸರ್’ ದಿನಪತ್ರಿಕೆಯ ವರದಿಗಾರ ಮಹಮ್ಮದ್ ಸಫ್ಜರ್ ಕೈಸರ್ ಉರ್ದು ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ಎಂಬ ಸುದ್ದಿ ಹರಡಿದ್ದು, ಈ ಕುರಿತು ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸರು ಶಾಂತಿ ಸಭೆ ನಡೆಸಿದರು.
ದೇವರಾಜ, ಲಷ್ಕರ್, ಮಂಡಿ, ಉದಯಗಿರಿ, ನರಸಿಂಹರಾಜ ಠಾಣಾ ವ್ಯಾಪ್ತಿಗಳಲ್ಲಿ ಶಾಂತಿ ಸಭೆಗಳು ನಡೆದರೆ, ಡಿಸಿಪಿ ಪ್ರದೀಪ್ಗುಂಟಿ ಅವರು ತಮ್ಮ ಕಚೇರಿಯಲ್ಲೂ ಶಾಂತಿಸಭೆ ನಡೆಸಿದರು. ಉರ್ದು ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಹಲ್ಲೆ ನಡೆದಿಲ್ಲ. ಗುರುತಿನ ಚೀಟಿ ತೋರಿಸದ ಕಾರಣಕ್ಕೆ ಕೆಲವರು ಹಲ್ಲೆ ನಡೆಸಿದರು ಎಂದು ಮುಖಂಡರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.
ಹಲ್ಲೆ ಖಂಡಿಸಿ ಎಸ್ಡಿಪಿಐ ಕಾರ್ಯಕರ್ತರು ಫೌಂಟೇನ್ ವೃತ್ತದ ಸಮೀಪ ಪ್ರತಿಭಟನೆ ನಡೆಸಿದರು.