ಮೈಸೂರು: ಸಂಸದ ಪ್ರತಾಪಸಿಂಹ ಅವರನ್ನು ಮತ್ತೊಮ್ಮೆ ಟೀಕಿಸಿದರೆ ವಿಧಾನಪರಿಷತ್ ಸದಸ್ಯ ರಘು ಆಚಾರ್ ಅವರಿಗೆ ಮಸಿ ಬಳಿಯುತ್ತೇವೆ, ಘೇರಾವ್ ಹಾಕುತ್ತೇವೆ ಎಂದು ಬಿಜೆಪಿ ಯುವ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷರಾದ ಜಯಶಂಕರ್ ಎಚ್ಚರಿಕೆ ನೀಡಿದರು.
ಚಿತ್ರದುರ್ಗದ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ದ್ವಿಚಕ್ರ ವಾಹನ ನೀಡಿ ಮತ ಪಡೆದಂತೆ ಪ್ರತಾಪಸಿಂಹ ಮತ ಪಡೆದಿಲ್ಲ. 1.30 ಲಕ್ಷಕ್ಕೂ ಅಧಿಕ ಮತಗಳಿಂದ ಪ್ರತಾಪಸಿಂಹ ಗೆದ್ದಿರುವುದು ಅವರ ಸಾಧನೆಯಿಂದ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಉಪಾಧ್ಯಕ್ಷ ಧೀರಜ್ ಪ್ರಸಾದ್ ಮಾತನಾಡಿ, ‘ಚಿತ್ರದುರ್ಗಕ್ಕೆ ಓಡಿ ಹೋಗಿರುವ ರಘು ಆಚಾರ್ ತಮ್ಮ ಸಾಧನೆ ಏನು ಎಂಬುದನ್ನು ಬಹಿರಂಗಪಡಿಸಬೇಕು. ಮತ್ತೊಮ್ಮೆ ಪ್ರತಾಪಸಿಂಹ ವಿರುದ್ಧ ಮಾತನಾಡಿದರೆ ನಮ್ಮ ಪ್ರತಿಕ್ರಿಯೆ ಮತ್ತಷ್ಟು ಖಾರವಾಗಿರಲಿದೆ’ ಎಂದು ತಿಳಿಸಿದರು.
ನಗರ ಘಟಕದ ಅಧ್ಯಕ್ಷ ಕಿರಣ್ಗೌಡ ಮಾತನಾಡಿ, ‘ನಾವೇ ವೇದಿಕೆಯನ್ನು ಕಲ್ಪಿಸಿಕೊಡುತ್ತೇವೆ. ಮುಕ್ತ ಚರ್ಚೆಗೆ ಧೈರ್ಯ ಇದ್ದರೆ ರಘು ಆಚಾರ್ ಬರಲಿ. ಇಲ್ಲವೇ ಪ್ರತಾಪಸಿಂಹ ಅವರ ಬೆಂಬಲಿಗರೊಬ್ಬರ ಎದುರು ಚುನಾವಣೆಯಲ್ಲಿ ಗೆದ್ದು ತೋರಿಸಲಿ’ ಎಂದು ಸವಾಲೆಸೆದರು.
ರಘು ಆಚಾರ್ ಈಚೆಗೆ ಸುದ್ದಿಗೋಷ್ಠಿ ನಡೆಸಿ, ನರೇಂದ್ರ ಮೋದಿ ಅಲೆಯಲ್ಲಿ ಗೆದ್ದಿರುವ ಸಂಸದ ಪ್ರತಾಪಸಿಂಹ ಅವರ ಸಾಧನೆ ಏನು? ಧೈರ್ಯವಿದ್ದರೆ ನನ್ನೆದುರು ಪಾಲಿಕೆ ಚುನಾವಣೆಯಲ್ಲಿ ಗೆಲ್ಲಲಿ ಎಂದು ಸವಾಲೆಸೆದಿದ್ದರು.