ಮೈಸೂರು: ನೈರುತ್ಯ ರೈಲ್ವೆ ವ್ಯಾಪ್ತಿಯ ಮೈಸೂರು ವಿಭಾಗ ಸಂಪೂರ್ಣ ವಿದ್ಯುದ್ದೀಕರಣಗೊಳ್ಳುವತ್ತ ಹೆಜ್ಜೆಯಿಟ್ಟಿದೆ.
ಮೈಸೂರು ವಿಭಾಗದ ಬೆಂಗಳೂರು–ಮೈಸೂರು ರೈಲ್ವೆ ಮಾರ್ಗ ಈಗಾಗಲೇ ವಿದ್ಯುದ್ದೀಕರಣಗೊಂಡಿದೆ. ಇದೀಗ ಈ ವಿಭಾಗದ ಪ್ರಮುಖ ಮಾರ್ಗವಾದ ಮೈಸೂರು–ಹಾಸನ–ಮಂಗಳೂರು ಮಾರ್ಗಕ್ಕೂ ವಿದ್ಯುದ್ದೀಕರಣದ ಭಾಗ್ಯ ದೊರಕಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019ರ ಫೆಬ್ರುವರಿಯಲ್ಲಿ ಮಂಡಿಸಿದ ತನ್ನ ಮೊದಲ ಅವಧಿಯ ಕೊನೆ ಬಜೆಟ್ನಲ್ಲಿ ಈ ಭಾಗದ ಮಾರ್ಗಗಳನ್ನು ವಿದ್ಯುದ್ದೀಕರಣಕ್ಕಾಗಿ ಪ್ರಸ್ತಾಪಿಸಿತ್ತು. ಅದಕ್ಕೀಗ ಹಣಕಾಸಿನ ಅನುಮೋದನೆ ಸಿಕ್ಕಿದೆ. ರೈಲ್ವೆ ಮಂಡಳಿ ಕಾಮಗಾರಿಯ ನಿರ್ವಹಣೆ ಹೊಣೆಯನ್ನು ಬೆಂಗಳೂರಿನಲ್ಲಿರುವ ಕೇಂದ್ರೀಯ ರೈಲ್ವೆ ವಿದ್ಯುದ್ದೀಕರಣ ಸಂಘಟನೆಗೆ ವಹಿಸಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.
₹ 316 ಕೋಟಿ ವೆಚ್ಚದಲ್ಲಿ ಮೈಸೂರು–ಹಾಸನ–ಮಂಗಳೂರು ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಆರಂಭಗೊಳ್ಳಲಿದೆ. ಇದರೊಳಗೆ ಹಾಸನ–ಅರಸೀಕೆರೆ ಮಾರ್ಗವೂ ಅಡಕಗೊಂಡಿದೆ. ಒಟ್ಟು 347 ಕಿ.ಮೀ. ವಿದ್ಯುದ್ದೀಕರಣ ನಡೆಯಲಿದೆ. 2022ರೊಳಗೆ ಈ ಕಾಮಗಾರಿ ಮುಗಿಯಬೇಕಿದೆ.
ಮೈಸೂರು–ಚಾಮರಾಜನಗರ ನಡುವಿನ 61 ಕಿ.ಮೀ. ದೂರದ ರೈಲ್ವೆ ಮಾರ್ಗದ ವಿದ್ಯುದ್ದೀಕರಣಕ್ಕೂ ಅಂತಿಮ ಹಸಿರು ನಿಶಾನೆ ಸಿಕ್ಕಿದೆ. ₹ 57 ಕೋಟಿ ಮೊತ್ತದ ಯೋಜನೆ ಇದಾಗಿದೆ. ಈ ಎರಡೂ ಯೋಜನೆಗಳನ್ನು ಬೆಂಗಳೂರಿನಲ್ಲಿ ಈಚೆಗಷ್ಟೇ ಕಾರ್ಯಾರಂಭಿಸಿದ ಕೇಂದ್ರೀಯ ರೈಲ್ವೆ ವಿದ್ಯುದ್ದೀಕರಣ ಸಂಘಟನೆ ಕಚೇರಿ ನಿರ್ವಹಿಸಲಿದೆ ಎಂಬುದು ರೈಲ್ವೆ ಮೂಲಗಳಿಂದ ಖಚಿತ ಪಟ್ಟಿದೆ.
‘ವಿದ್ಯುದ್ಧೀಕರಣ ಕಾಮಗಾರಿ ಪೂರ್ಣಗೊಂಡರೆ, ರೈಲುಗಳ ಸಂಚಾರದ ವೇಗ ತುಸು ಹೆಚ್ಚಲಿದೆ. ಇದರ ಜತೆ ವಿವಿಧ ಜಂಕ್ಷನ್ಗಳಲ್ಲಿ ರೈಲ್ವೆ ಎಂಜಿನ್ಗೆ ಡೀಸೆಲ್ ತುಂಬಿಸುವ ಕಿರಿಕಿರಿ ತಪ್ಪಲಿದೆ. ಪ್ರಯಾಣದ ಅವಧಿಯೂ ತಗ್ಗಲಿದೆ’ ಎಂದು ರೈಲ್ವೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.