ಮೈಸೂರು: ದಸರೆ ಬಂದರೆ ಮನೆಯಲ್ಲೂ ಜಾತ್ರೆ. ಮೂವತ್ತರಿಂದ ನಲವತ್ತು ನೆಂಟರು ಸೇರುತ್ತಿದ್ದರು. ಬೆಂಗಳೂರು, ಮಂಡ್ಯ, ಚಾಮರಾಜನಗರವಲ್ಲದೇ ತಮಿಳುನಾಡಿನಿಂದಲೂ ಬರುತ್ತಿದ್ದರು. ವಾರಗಟ್ಟಲೆ ಇರುತ್ತಿದ್ದರಿಂದ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಮೈಸೂರು ನಗರದಲ್ಲಿ ಸುತ್ತಾಡುತ್ತಿದ್ದೆವು. ದಸರೆ ಬಳಿಕ ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿದ್ದ ಚಾಮುಂಡೇಶ್ವರಿ ದೇವಿಯ ಉತ್ಸವವನ್ನೂ ನೋಡಿಕೊಂಡು ಹೋಗುತ್ತಿದ್ದರು ಎಂದುದಸರೆಯ ನೆನಪುಗಳನ್ನು ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಪ್ರಜಾವಾಣಿ ಜೊತೆ ಹಂಚಿಕೊಂಡರು.