ಮೈಸೂರು: ‘ಪ್ರತಿ ದಿನ ಒಂದೊಂದು ಹಗರಣ ಹೊರಬರುತ್ತಿದ್ದು, ಕೆಟ್ಟ ಹೆಸರು ಪಡೆದಿರುವ ಈ ರಾಜ್ಯ ಸರ್ಕಾರವನ್ನು ಬಿಜೆಪಿ ಕಾರ್ಯಕರ್ತರೇ ಮೆಚ್ಚುವುದಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಕಿಂಗ್ಪಿನ್ಗಳ ಜೊತೆಗೆ ಪೊಲೀಸ್ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗಿಯಾಗಿರುವ ಶಂಕೆ ಇದೆ. ಹೀಗಾಗಿ, ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.
‘ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಿದೆ. ಪರೀಕ್ಷೆಯ ಪಾವಿತ್ರ್ಯವೇ ಹಾಳಾಗುತ್ತಿದೆ. ಚೆನ್ನಾಗಿ ಓದಿಕೊಂಡವರು ಯಾವಾಗ ಪರೀಕ್ಷೆ ಎದುರಿಸಿದರೂ ಉತ್ತೀರ್ಣರಾಗುತ್ತಾರೆ. ಓದದೇ ಇರುವವರಿಗಷ್ಟೇ ಆತಂಕ’ ಎಂದು ಅವರು ಹೇಳಿದರು.
‘ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನಡೆದಿರುವ ವಿಚಾರಗಳನ್ನು ಮನವರಿಕೆ ಮಾಡುವುದನ್ನು ಬಿಟ್ಟು ಬೇರೆಯವರ ಮೇಲೆ ಆರೋಪ ಮಾಡುತ್ತಾರೆ. ಕೆಲಸಕ್ಕೆ ಬಾರದ ಮಾತನಾಡಿ ಜನರಲ್ಲಿ ಗೊಂದಲ ಮೂಡಿಸುತ್ತಿರುವ ಶ್ರೀರಾಮಸೇನೆ, ಆರ್ಎಸ್ಎಸ್, ಬಜರಂಗದಳದ ಮುಖಂಡರ ವಿರುದ್ಧ ಮುಖ್ಯಮಂತ್ರಿ ತಮ್ಮ ಅಸ್ತ್ರ ಬಳಸಲಿ’ ಎಂದು ವಿಶ್ವನಾಥ್ ಆಗ್ರಹಿಸಿದರು.