ಮೈಸೂರು: ನಗರದಲ್ಲಿ ಸೋಮವಾರ ತಡರಾತ್ರಿ 5 ಸೆಂಟಿಮೀಟರ್ ನಷ್ಟು ಧಾರಾಕಾರ ಮಳೆ ಸುರಿದಿದೆ. ತಾಲ್ಲೂಕಿನ ಇಲವಾಲ ಮತ್ತು ಗೋಪಾಲಪುರ ಗ್ರಾಮಗಳಲ್ಲಿ ತಲಾ ಒಂದೊಂದು ಮನೆಯ ಗೋಡೆಗಳು ಕುಸಿದಿವೆ.
ನಗರದಲ್ಲಿ 8 ಕಡೆ ಮರಗಳು ಧರೆಗುರುಳಿವೆ. ಹಸುವೊಂದು ಚಾಮರಾಜ ಜೋಡಿರಸ್ತೆಯಲ್ಲಿ ಮಳೆಗೆ ಸಿಲುಕಿ ಮೃತಪಟ್ಟಿದೆ. ಸಿಡಿಲಿನ ಆಘಾತಕ್ಕೆ ಮೃತಪಟ್ಟಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಉಳಿದಂತೆ, ನಂಜನಗೂಡಿನ ಹುಲ್ಲಹಳ್ಳಿಯಲ್ಲಿ 4, ಕೆ.ಆರ್.ನಗರ ತಾಲ್ಲೂಕಿನ ಅಡಗೂರಿನಲ್ಲಿ 3, ಹುಣಸೂರು ತಾಲ್ಲೂಕಿನ ಮೋದೋರಿನಲ್ಲಿ 3 ಹಾಗೂ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ 2 ಸೆಂಟಿಮೀಟರ್ ನಷ್ಟು ಮಳೆ ಸುರಿದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ