ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತಪ್ರಿಯರ ಮನಗೆದ್ದ ಲಯತರಂಗ

ಅರಮನೆ ಆವರಣದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರೆ, ಕಲಾರಸಿಕರ ತಲುಪಿದ ನೇರಪ್ರಸಾರ
Last Updated 25 ಅಕ್ಟೋಬರ್ 2020, 8:09 IST
ಅಕ್ಷರ ಗಾತ್ರ

ಮೈಸೂರು: ಲಯವಾದ್ಯಗಳ ನಾದವಿನ್ಯಾಸದ ಲಾಲಿತ್ಯದಲ್ಲಿ ಖ್ಯಾತಿ ಹೊಂದಿರುವ ಬೆಂಗಳೂರಿನ 'ಲಯತರಂಗ' ಸಂಗೀತ ತಂಡದವರ ಪ್ರದರ್ಶನ ಪ್ರೇಕ್ಷಕರಿಗೆ ಮುದ ನೀಡಿತು.

ನಾಡಹಬ್ಬ ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದ ಕಡೆಯ ದಿನವಾದ ಶನಿವಾರ ವಿದ್ವಾನ್ ಗಿರಿಧರ ಉಡುಪ ಮತ್ತು ತಂಡದವರು ಹಲವು ಪ್ರಸಿದ್ಧ ಸಂಗೀತ ರಚನೆಗಳನ್ನು ಪ್ರಸ್ತುತಪಡಿಸಿದರು.

ಕರ್ನಾಟಕ ಶಾಸ್ತ್ರೀಯದಲ್ಲಿ ಲಯಬದ್ಧ, ಕುತೂಹಲ ಕೆರಳಿಸುವ ಸಂಗೀತವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪ್ರದರ್ಶನ ನೀಡುವ ಮೂಲಕ ದಸರಾ ಸಾಂಸ್ಕೃತಿಕ ಕಾರ್ಯ ಕ್ರಮಕ್ಕೆ ಅರ್ಥಪೂರ್ಣವಾಗಿ ತೆರೆ ಎಳೆದರು.

ಪ್ರಮುಖವಾಗಿ ಹೇಮಾವತಿ ರಾಗದಲ್ಲಿ ರಾಗ-ತಾನ-ಪಲ್ಲವಿ ಎಂಬ ವಿಶಿಷ್ಟ ಪ್ರಕಾರವನ್ನು ಮನೋಜ್ಞವಾಗಿ ಸಂಗೀತದ ಸುಂದರ ಸಮ್ಮಿಶ್ರಣ ಮಾಡುವ ಮೂಲಕ ಶ್ರೋತೃಗಳಿಗೆ ಉಣಬಡಿಸಿದರು.

ಪುರಂದರದಾಸರ ರಚನೆಯ ಕೃಷ್ಣಾ ನೀ ಬೇಗನೆ ಬಾರೋ, ಜೈ ಜಗದೀಶ್ವರಿ ಮಾತಾ ಸರಸ್ವತಿ, ಹರಿಕುಣಿದಾ ನಮ್ಮ ಹರಿಕುಣಿದಾ, ಜಗದೋದ್ದಾರನ ಹಾಡಿಸಿದಳೆ ಯಶೋಧೆ, ಭಾಗ್ಯದ ಲಕ್ಷ್ಮಿ ಬಾರಮ್ಮ ಗೀತೆಗಳನ್ನು ಸುಮಧುರವಾಗಿ ಹಾಡಿದರು.

ದೇಶದ ಕೆಲವೇ ಕೆಲವು ಪ್ರಸಿದ್ಧ ಫ್ಯೂಷನ್ ಬ್ಯಾಂಡ್‌ಗಳಲ್ಲಿ ವಿಶೇಷವಾದ ಮಾನ್ಯತೆ ಪಡೆದಿರುವ ಲಯತರಂಗ ತಂಡವು ಶಾಸ್ತ್ರೀಯತೆಯ ಜೊತೆಗೆ ನವೀನತೆಯ ನೆರಳನ್ನು ತೋರಿಸುತ್ತಾ ಪ್ರೇಕ್ಷಕರ ಮನಸೂರೆಗೊಂಡಿತು.

ಘಟಂನಲ್ಲಿ ವಿದ್ವಾನ್ ಗಿರಿಧರ ಉಡುಪ, ವೇಣು ವಾದನದಲ್ಲಿ ಕೂಳೂರು ರವಿಚಂದ್ರ, ಮೃದಂಗದಲ್ಲಿ ಕೂಳೂರು ಜಯಚಂದ್ರರಾವ್, ಡ್ರಮ್ಸ್‌ನಲ್ಲಿ ಅರುಣ್ ಕುಮಾರ್, ತಬಲಾ ಮತ್ತು ಲಾಟಿನ್ ಪರ್ಕಷನ್‌ನಲ್ಲಿ ಪ್ರಮತ್ ಕಿರಣ್, ಸಿದ್ದಾರ್ಥ್ ಬೆಳಮಣ್ಣು ಕಾರ್ಯಕ್ರಮ ನಡೆಸಿಕೊಟ್ಟರು.

ಈ ಬಾರಿಯ ದಸರಾ ಉತ್ಸವ ಸರಳ ವಾಗಿ ಆಯೋಜಿಸಿದ ಕಾರಣ ಅರಮನೆ ಆವರಣದಲ್ಲಿ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅ.17 ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವರ್ಚುವಲ್‌ ವೇದಿಕೆ ಮೂಲಕ ಚಾಲನೆ ಕೊಟ್ಟಿದ್ದರು. ಎಂಟು ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕೋವಿಡ್‌ ಕಾರಣ ಪ್ರತಿದಿನದ ಕಾರ್ಯಕ್ರಮಕ್ಕೆ ಕೆಲವು ಮಂದಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರವಿದ್ದ ಕಾರಣ ಕಾರ್ಯಕ್ರಮ ಕಲಾರಸಿಕರನ್ನು ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT