ಮೈಸೂರು: ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಗುರುವಾರ ಒಡನಾಡಿ ಸಂಸ್ಥೆಯ ಮಕ್ಕಳೊಂದಿಗೆ ತಮ್ಮ 73ನೇ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು.
‘ಕೋವಿಡ್ ಪ್ರಪಂಚವನ್ನೇ ತಲ್ಲಣಗೊಳಿಸಿದೆ. ಕೆಟ್ಟ ಸಾಂಕ್ರಾಮಿಕ ರೋಗವಿದು. ಹೇಳಲಾಗದ ಕಾಯಿಲೆ. ಆದ್ದರಿಂದ ಜನ್ಮದಿನ ನಿಮಿತ್ತದ ಎಲ್ಲ ಕಾರ್ಯಕ್ರಮ ರದ್ದುಗೊಳಿಸಿರುವೆ. ಯಾರೊಬ್ಬರೂ ಶುಭಾಶಯ ಕೋರಲು ಬರಬೇಡಿ’ ಎಂದು ಮನವಿ ಮಾಡಿದ್ದೇನೆ ಎಂದು ಪ್ರಸಾದ್ ತಿಳಿಸಿದರು.
‘ಹಲವು ವರ್ಷಗಳಿಂದಲೂ ಒಡನಾಡಿ ಸಂಸ್ಥೆಯ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವೆ. ಕೋವಿಡ್ನ ಆತಂಕದಲ್ಲೂ ಇಲ್ಲಿನ ಮಕ್ಕಳ ಜೊತೆ ಕೆಲ ಸಮಯ ಕಳೆಯಲು ಬಂದಿರುವೆ. ಇಲ್ಲಿಗೆ ಬಂದರೆ ಮನಸ್ಸಿಗೆ ನೆಮ್ಮದಿ. ಜನ್ಮ ದಿನಾಚರಣೆಯೂ ಸಾರ್ಥಕ’ ಎಂದು ಹೇಳಿದರು.
‘ಒಡನಾಡಿ ಸಂಸ್ಥೆ ಎಲ್ಲೆಡೆ ಉತ್ತಮ ಹೆಸರು ಗಳಿಸಿದೆ. ಸಂಸ್ಥೆ ಹಾಗೂ ಇಲ್ಲಿನ ಮಕ್ಕಳಿಗೆ ನೆರವು ಒದಗಿಸಲು, ಸಹಕಾರ ನೀಡಲು ನಾನು ಬದ್ಧ’ ಎಂದರು.
‘ಛಾಯಾದೇವಿ ಅನಾಥ ಆಶ್ರಮವೂ ಸಹ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದೆ. ಅಲ್ಲಿಯೂ ಸಹ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಪ್ರಸಾದ್ ತಿಳಿಸಿದರು.
ಮಕ್ಕಳೊಟ್ಟಿಗೆ ಕೇಕ್ ಕತ್ತರಿಸಿದ ಪ್ರಸಾದ್, ಎಲ್ಲರಿಗೂ ಹಣ್ಣು, ಸ್ಯಾನಿಟೈಸರ್ ವಿತರಿಸಿ ಸಂಭ್ರಮಿಸಿದರು.
ಒಡನಾಡಿ ಸ್ವಯಂ ಸೇವಾ ಸಂಸ್ಥೆಯ ಸ್ಟ್ಯಾನ್ಲಿ-ಪರಶು, ಬಸವೇಗೌಡ, ನಂದಕುಮಾರ್, ಪ್ರಸನ್ನ ಉಪಸ್ಥಿತರಿದ್ದರು.