ಮೈಸೂರು: ಹುಣಸೂರು ತಾಲ್ಲೂಕಿನ ನಾಗರಹೊಳೆ ಹುಲಿ ರಕ್ಷಿತಾರಣ್ಯದ ಹಂದಿಹಳ್ಳದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ 8 ವರ್ಷದ ಗಂಡು ಹುಲಿ ಬುಧವಾರ ಸೆರೆಯಾಗಿದೆ.
ಮಂಗಳವಾರವಷ್ಟೇ ಇಲ್ಲಿನ ನೇರಳಕುಪ್ಪೆ ಬಿ ಹಾಡಿಯ ಕುರಿಗಾಹಿ ಜಗದೀಶ್ ಎಂಬುವವರ ರುಂಡ ಮತ್ತು ಕೈಗಳು ಇಲ್ಲಿ ಪತ್ತೆಯಾಗಿದ್ದವು. ಹುಲಿಯು ದೇಹದ ಉಳಿದೆಲ್ಲ ಭಾಗಗಳನ್ನೂ ತಿಂದು ಹಾಕಿತ್ತು.
ಇವರ ದೇಹದ ಅವಯವಗಳು ಪತ್ತೆಯಾದ ಸ್ಥಳದಲ್ಲೇ ಮಾಂಸವನ್ನಿರಿಸಿ ಬೋನನ್ನು ಇಡಲಾಗಿತ್ತು. ಬುಧವಾರ ನಸುಕಿನಲ್ಲಿ ಹುಲಿ ಬೋನಿನಲ್ಲಿ ಸೆರೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಹಲವು ತಿಂಗಳುಗಳಿಂದ ಹುಲಿಯು ಹಲವು ಜಾನುವಾರುಗಳನ್ನು ತಿಂದು ಹಾಕಿ, ಆತಂಕ ಮೂಡಿಸಿತ್ತು. ಹುಲಿಯನ್ನು ಕೂರ್ಗಳ್ಳಿಯ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.