ಮೈಸೂರು: ‘ಸೌಲಭ್ಯಗಳನ್ನು ಪಡೆದುಕೊಳ್ಳಲು ಸಮುದಾಯಗಳು ಒಗ್ಗಟ್ಟಾಗಬೇಕು’ ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದರು.
ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನುಲಿಯ ಚಂದಯ್ಯ ಜಯಂತ್ಯುತ್ಸವ ಸಮಿತಿಯಿಂದ ನಗರದ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಚಂದಯ್ಯ ಅವರನ್ನು ಇಂದಿಗೂ ಸ್ಮರಿಸುತ್ತಿರುವುದಕ್ಕೆ ಅವರು ಕಾಯಕ ಯೋಗಿಯಾಗಿದ್ದ ಕಾರಣ. ಸಮಾಜಕ್ಕೆ ಒಳ್ಳೆಯದಾಗುವಂತಹ ಹಲವು ವಿಷಯಗಳನ್ನು ತಿಳಿಸಿದ್ದಾರೆ. ಅವರ 48 ವಚನಗಳು ಲಭ್ಯವಾಗಿವೆ’ ಎಂದರು.
ನಿವೃತ್ತ ಅಧಿಕಾರಿ ಎಸ್.ಟಿ.ಅಂಜನ್ಕುಮಾರ್ ಮಾತನಾಡಿ, ‘ಪರಿಶಿಷ್ಟ ಜಾತಿಗೆ ಸೇರಿದ ಅತ್ಯಂತ ಹಿಂದುಳಿದ ಕೊರವಂಜಿ, ಭಜಂತ್ರಿ ಮೊದಲಾದ ಹೆಸರುಗಳಿಂದ ರಾಜ್ಯದಾದ್ಯಂತ ಹಂಚಿ ಹೋಗಿರುವ ಸಮಾಜವೆಂದರೆ ಕೊರಮ–ಕೊರಚ ಜನಾಂಗ. ನಾಯಕತ್ವ ಮತ್ತು ಸಂಘಟನೆ ಕೊರತೆ ಇರುವುದರಿಂದ ಸಮಾಜದವರು ಸೌಲಭ್ಯವನ್ನು ಬಳಸಿಕೊಳ್ಳಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಜಾಗೃತಿ ಅತ್ಯಗತ್ಯವಾಗಿದೆ’ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಸುದರ್ಶನ್, ಮುಖಂಡರಾದ ಕೃಷ್ಣಶೆಟ್ಟಿ, ಶಿವಶಂಕರ್, ಬಲರಾಜ್ ಇದ್ದರು.