ಮೈಸೂರು: ರಾಜ್ಯ ಸರ್ಕಾರ ಭಾನುವಾರದ ಲಾಕ್ಡೌನ್ ವಾಪಸ್ ಪಡೆದರೂ, ನಗರ ವ್ಯಾಪ್ತಿಯಲ್ಲಿ ಜನ ಸಂಚಾರ ವಿರಳವಾಗಿತ್ತು. ವಾಹನ ದಟ್ಟಣೆಯೂ ಹೆಚ್ಚಿನದಾಗಿ ಗೋಚರಿಸಲಿಲ್ಲ.
ನಗರ ಬಸ್ ನಿಲ್ದಾಣದಲ್ಲಿ ಹಿಂದಿನ ಜನದಟ್ಟಣೆ ಕಂಡು ಬರಲಿಲ್ಲ. ದಿನವಿಡಿ ವಾಹನ ಚಾಲಕರು–ನಿರ್ವಾಹಕರು ಪ್ರಯಾಣಿಕರಿಗಾಗಿ ಕಾದು ಕೂತರು. ಹಲವರು ಗುಂಪಾಗಿ ಕೂತು ಚರ್ಚಿಸಿದರು. ಮಧ್ಯಾಹ್ನ ಗತಿಸಿದರೂ ಹಲವು ಬಸ್ಗಳು ಒಂದು ಸುತ್ತಿನ ಸಂಚಾರವನ್ನು ನಡೆಸಲಿಲ್ಲ.
ಪ್ರಯಾಣಿಕರ ಕೊರತೆಯಿಂದ ಸಕಾಲಕ್ಕೆ ಬಸ್ಗಳು ಸಂಚರಿಸಲಿಲ್ಲ. ಇದರಿಂದಾಗಿ ನಗರದ ವಿವಿಧೆಡೆ ಬಸ್ಗಾಗಿ ಕಾದ ಪ್ರಯಾಣಿಕರು ಬೇಸತ್ತು, ಪರ್ಯಾಯ ವ್ಯವಸ್ಥೆ ಮಾಡಿಕೊಂಡ ದೃಶ್ಯಗಳು ಗೋಚರಿಸಿದವು.
ಗ್ರಾಮಾಂತರ ವಿಭಾಗದ ಸಬರ್ಬನ್ ಬಸ್ ನಿಲ್ದಾಣದಲ್ಲಿ ಕೊಂಚ ಪ್ರಯಾಣಿಕರು ಗೋಚರಿಸಿದರು. ಗ್ರಾಮೀಣ ಪ್ರದೇಶಗಳಿಗೆ ತೆರಳುವವರು, ಅಲ್ಲಿಂದ ಬರುವವರು ಕಂಡು ಬಂದರು. ಎರಡೂ ಕಡೆ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ನಡೆದಿತ್ತು.
ನಗರದ ವಿವಿಧ ಮಾರುಕಟ್ಟೆ ಪ್ರದೇಶಗಳಲ್ಲಿನ ಅಂಗಡಿಗಳು ತೆರೆದು ವಹಿವಾಟು ನಡೆಸಲಿಲ್ಲ. ಬೆಳಿಗ್ಗೆ ತೆರೆದಿದ್ದವರು ಸಂಜೆಯ ವೇಳೆಗೆ ಬಾಗಿಲು ಮುಚ್ಚಿದ್ದ ಚಿತ್ರಣ ಎಲ್ಲೆಡೆ ಕಂಡು ಬಂದಿತು.