ಮೈಸೂರು: ‘ಮೈಸೂರು ಪಾಲಿಕೆ ಮೇಯರ್ ಚುನಾವಣೆಯಲ್ಲಿ ಹುಸಿ ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್– ಜೆಡಿಎಸ್ನಿಂದಾಗಿಯೇ ಬಿಜೆಪಿ ಅಧಿಕಾರ ಹಿಡಿದಿದೆ’ ಎಂದುಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಹೇಳಿದರು.
‘ಎರಡೂ ಪಕ್ಷಗಳಿಗೆ ಜಾತ್ಯತೀತ ತತ್ವದ ಮೇಲೆ ನಂಬಿಕೆಯಿಲ್ಲ. ಅಲ್ಪಸಂಖ್ಯಾತರಿಗೆ ಉಪಮೇಯರ್ ಆಮಿಷ ತೋರಿ ಪೂರಕ ದಾಖಲೆಯನ್ನು ನೀಡದೆ ಜೆಡಿಎಸ್ ವಂಚಿಸಿದೆ’ ಎಂದು ಬುಧವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ಪಕ್ಷಗಳ ವರಿಷ್ಠರು ಅಹಂಕಾರ ಮರೆತು ಒಂದಾಗಿದ್ದರೆ, ಪಾಲಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಉತ್ತಮ ಸ್ಥಾನ ಸಿಗುತ್ತಿತ್ತು. ಅಧಿಕಾರ ತಪ್ಪಿಸುವ ಉದ್ದೇಶದಿಂದಲೇ ಮೈತ್ರಿ ನಡೆಸಿಲ್ಲ. ಜೆಡಿಎಸ್ ನಾಯಕರು ರೇಷ್ಮಾ ಬಾನು ಅವರಿಗೆ ಜಾತಿ ಪ್ರಮಾಣಪತ್ರ ಸಿದ್ಧ ಮಾಡಿಟ್ಟುಕೊಳ್ಳಲು ಹೇಳಲಾರದ ಅಜ್ಞಾನಿಗಳೇ’ ಎಂದು ಪ್ರಶ್ನಿಸಿದರು.
ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ಮಾತನಾಡಿ, ‘ದಲಿತರು ಹಾಗೂ ಅಲ್ಪಸಂಖ್ಯಾತರನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ದೂರವಿಡುವ ಷಡ್ಯಂತ್ರ ನಡೆಸುತ್ತಿವೆ. ಆದ್ದರಿಂದ ಎಚ್ಚೆತ್ತುಕೊಳ್ಳಬೇಕು’ ಎಂದರು.
ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ರಫತ್ಖಾನ್, ಉಪಾಧ್ಯಕ್ಷ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಫಿವುಲ್ಲಾ, ಸದಸ್ಯ ಅಮ್ಜದ್ಖಾನ್ ಇದ್ದರು.