ಮೈಸೂರು: ‘ಸ್ವಾತಂತ್ರ್ಯ ಹೋರಾಟಕ್ಕೆ ಆರ್ಎಸ್ಎಸ್, ಬಿಜೆಪಿ ಕೊಡುಗೆ ಏನು’ ಎಂಬ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆಗೆ ಸಂಸದ ಪ್ರತಾಪ ಸಿಂಹ ಶನಿವಾರ ವಾಗ್ದಾಳಿ ನಡೆಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ‘ಸ್ವಾತಂತ್ರ್ಯ ಚಳವಳಿ ಅಧಿಕೃತವಾಗಿ ಆರಂಭವಾಗಿದ್ದು 1857ರಲ್ಲಿ. ಅದನ್ನು ಬ್ರಿಟಿಷರು ಸಿಪಾಯಿ ದಂಗೆ ಎಂದು ಕರೆದಿದ್ದರು. ಅದನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಜನರಿಗೆ ತಿಳಿಸಿದ್ದೇ ಸಾವರ್ಕರ್. ಆಗ ಕಾಂಗ್ರೆಸ್ ಹುಟ್ಟೇ ಇರಲಿಲ್ಲ. ಇಂದಿನ ಕಾಂಗ್ರೆಸ್ ಎಂಬ ರಾಜಕೀಯ ಪಕ್ಷಕ್ಕೂ–ಸ್ವಾತಂತ್ರ್ಯ ಹೋರಾಟದಲ್ಲಿದ್ದ ಕಾಂಗ್ರೆಸ್ಗೂ ಸಂಬಂಧವೇ ಇಲ್ಲ’ ಎಂದು ಹೇಳಿದರು.
‘ಸಿದ್ದರಾಮಯ್ಯ ಯಾವ ಕಾಂಗ್ರೆಸ್ ಬಗ್ಗೆ ಮಾತನಾಡುತ್ತಿದ್ದಾರೆ? ನೆಹರೂ, ಇಂದಿರಾ ಗಾಂಧಿ ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತಿದ್ದಾರೆಯೇ? ಭಗತ್ ಸಿಂಗ್, ರಾಜಗುರು ಅವರಂತಹ ಕ್ರಾಂತಿಕಾರಿಗಳು ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಅವರು ಕಾಂಗ್ರೆಸ್ನವರಾ? ಇತಿಹಾಸದ ಕನಿಷ್ಠ ಜ್ಞಾನವೂ ಸಿದ್ದರಾಮಯ್ಯ ಅವರಿಗೆ ಇಲ್ಲ’ ಟೀಕಿಸಿದರು.
‘ಕ್ರಾಂತಿಕಾರಿಗಳು ಸ್ವಾತಂತ್ರ್ಯ ತಂದು ಕೊಡುತ್ತಾರೆ ಎಂದು ಗೊತ್ತಿತ್ತು. ಹೀಗಾಗಿ, 1925ರಲ್ಲಿ ಸ್ವಾತಂತ್ರ್ಯ ಕಾಪಾಡಿಕೊಳ್ಳಲು ಆರ್ಎಸ್ಎಸ್ ಹುಟ್ಟಿತು. ಸಿದ್ದರಾಮಯ್ಯ ಮೂಲ ಕಾಂಗ್ರೆಸ್ನವರಾ? ಅವರ ಕುಟುಂಬ ಸ್ವಾತಂತ್ರ್ಯಕ್ಕೆ ಹೋರಾಡಿದೆಯೇ? ಸಮಾಜವಾದ ಎಂದುಕೊಂಡು ಇದ್ದ ಸಿದ್ದರಾಮಯ್ಯ ಕಾಂಗ್ರೆಸ್ಗೆ ಸೇರಿರಲಿಲ್ಲವೇಕೆ, ಆ ಪಕ್ಷದ ವಿರೋಧಿ ಬಣದಲ್ಲಿದ್ದರೇಕೆ?’ ಎಂದು ಕೇಳಿದರು.
‘ಹಿಂದೂ, ರಾಷ್ಟ್ರ ವಿರೋಧಿ ಪೋಷಕ ಜಮೀರ್ ಅಹಮದ್ ಅವರಂಥವರನ್ನು ಸಿದ್ದರಾಮಯ್ಯ ಪೋಷಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.