ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಹವಾ: ಯುವಜನ ಮಹೋತ್ಸವದಲ್ಲಿ ಭಾಗಿ

Last Updated 11 ಆಗಸ್ಟ್ 2022, 12:48 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನ ಗಲ್ಲಿ ಗಲ್ಲಿಗಳಲ್ಲಿಬೀಟ್ ಹಾಕಿಕೊಂಡಿದ್ದೆ, ಸಣ್ಣ ಬದಲಾವಣೆಗಳು ಬದಲಾಯಿಸಿದವು...

– ಹೀಗೆಂದವರು ಚಲನಚಿತ್ರ ನಟ ಯಶ್.

ಮೈಸೂರು ವಿಶ್ವವಿದ್ಯಾಲಯದಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಯುವಜನ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿ ಜೀವನದಲ್ಲಿ ಖಂಡಿತವಾಗಿಯೂ ತಂದೆ–ತಾಯಿ ಖುಷಿಯಾಗುವಷ್ಟು ಒಳ್ಳೆಯ ರೀತಿಯಲ್ಲಿ ಇದ್ದವನಲ್ಲ. ಬಹಳ ಬೇಜವಾಬ್ದಾರಿಯಿಂದ, ಸ್ಟಂಟ್‌ಗಳನ್ನು ಮಾಡಿಕೊಂಡು, ಹುಡುಗರೊಂದಿಗೆ ಕಾಳಿದಾಸ ರಸ್ತೆ, ಒಂಟಿ ಕೊಪ್ಪಲು, ಪಡುವಾರಹಳ್ಳಿ, ಗಂಗೋತ್ರಿಯಲ್ಲಿ ಬೀಟ್‌ ಹಾಕಿಕೊಂಡು ಇದ್ದವನು. ಈಗ ಅದೇ ಊರಲ್ಲಿ ಇಷ್ಟೊಂದು ಪ್ರೀತಿ ಸಿಗುತ್ತಿರುವುದು ಖುಷಿಯ ವಿಚಾರ’ ಎಂದರು.

‘ಅಂಥದ್ದೇನು ಬಹಳ ಬದಲಾವಣೆ ಮಾಡಿಕೊಂಡಿಲ್ಲ. ಸಣ್ಣ ಬದಲಾವಣೆಗಳು ಬದಲಾಯಿಸಿಬಿಡುತ್ತವೆ. ಸಾಧಿಸಬೇಕಾದರೆ ತುಂಬಾ ಬೋರಿಂಗ್ ಆಗಿರಬೇಕು; ಎಲ್ಲ ಬಿಟ್ಟು ಜೀವನದಲ್ಲಿ ತಪಸ್ಸು ಮಾಡಬೇಕು ಎಂದುಕೊಳ್ಳುತ್ತೇವೆ. ಅದಲ್ಲ. ಸಣ್ಣ ಸಣ್ಣ ವಿಷಯ ಹಾಗೂ ಟ್ಯೂನಿಂಗ್‌ಗಳಿಂದ ಏನು ಬೇಕಾದರೂ ಸಾಧಿಸಬಹುದು. ಮುಖ್ಯವಾಗಿ ಆತ್ಮವಿಶ್ವಾಸವಿರಬೇಕು’ ಎಂದು ತಿಳಿಸಿದರು.

ಪಾಸಿವಿಟ್ ಎನರ್ಜಿ ಬೇಕು

‘ಕನ್ನಡ ಸಿನಿಮಾಕ್ಕೆ ಇಡೀ ಭಾರತ ಇಷ್ಟು ಬೇಗ ದೊಡ್ಡ ಗೌರವ ಕೊಡುತ್ತದೆ ಎಂದು ನಂಬಿದ್ರಾ? ಅದು ಆಗಿದೆಯಲ್ಲವೇ? ಸತ್ಯ ತಾನೆ? ಮುಕ್ತವಾಗಿಯೇ ಮಾತನಾಡುತ್ತೇನೆ. ಅದರಲ್ಲಿ ನನಗೇನೂ ಸಂಕೋಚವಿಲ್ಲ. ಏಕೆಂದರೆ, ಪಾಸಿಟಿವ್ ಎನರ್ಜಿ ಯಾವಾಗಲೂ ಹರಡಬೇಕು’ ಎಂದರು.

‘ಕೆಲವು ದಿನಗಳ ಹಿಂದೆ ನಾವು ಆತ್ಮವಿಶ್ವಾಸದಿಂದ ಮಾತನಾಡುವಾಗ, ಏನಿವನು ಬಹಳ ಎಗರಾಡುತ್ತಿದ್ದಾನೆ ಎನಿಸಿರಬೇಕು. ಒಳ್ಳೆಯದು ಮಾತನಾಡಿದರೆ, ಯೋಚಿಸಿದರೆ ಮಿಕ್ಕಿದ್ದೆಲ್ಲವೂ ತಾನಾಗಿಯೇ ಬರುತ್ತಿರುತ್ತದೆ. ಯಾರೋ ಒಂದಷ್ಟು ಜನ ಒಳ್ಳೆಯವರು ಸೇರಿಕೊಳ್ಳುತ್ತಾರೆ. ಒಬ್ಬರಿಂದಲೇ ಎಲ್ಲವೂ ಆಗುವುದಿಲ್ಲ. ಆ ಕಡೆಗೆ ಗಮನ ಕೊಡಬೇಕು’ ಎಂದು ಸಲಹೆ ನೀಡಿದರು.

ನಮ್ಮೊಳಗೇ ಒಂದು ಸರ್ಕಾರವಿರಲಿ

‘ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರಿಸೋಣ. ಈಗ ಆಡಳಿತ ಮಾಡುತ್ತಿರುವವರು ಹಾಗೂ ಅವರ ಯೋಜನೆಗಳನ್ನು ಸ್ಮರಿಸೋಣ. ಅದನ್ನು ನಂಬೋಣ. ಆದರೆ, ನಮ್ಮೊಳಗೆ ಒಂದು ಸರ್ಕಾರ ಹುಟ್ಟಬೇಕು. ನಮ್ಮೊಳಗೆ ನಾವೇ ಯೋಜನೆ ಹಾಕಿಕೊಳ್ಳಬೇಕು. ಕಾರ್ಯರೂಪಕ್ಕೆ ತರಬೇಕು. ಅವರವರ ಕ್ಷೇತ್ರದಲ್ಲಿ ಇರುವ ಕಷ್ಟಗಳನ್ನು ದಾಟಿ ಮುಂದೆ ಬರುವಂತಾದರೆ ದೇಶ ತಾನಾಗಿಯೇ ಮುಂದೆ ಹೋಗುತ್ತದೆ. ಇನ್ನೇನೂ ಬೇಕಾಗುವುದಿಲ್ಲ’ ಎಂದು ತಿಳಿಸಿದರು.

‘ಯಾರು ಏನು ಬೇಕಾದರೂ ಸಾಧಿಸಬಹುದು. ಕುಳಿತಲ್ಲೇ, ಚಿಕ್ಕ ಹಳ್ಳಿಯಿಂದ ಇಂಟರ್‌ನೆಟ್‌ ಸಂಪರ್ಕವಿದ್ದರೆ ಸಮಸ್ಯೆಗಳನ್ನು ಪರಿಹರಿಸಬಹುದು. ಶಕ್ತಿಯನ್ನು ಅದಕ್ಕೆ ಬಳಸಿಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ತಿಳಿದು ಸದ್ಬಳಕೆ ಮಾಡಿಕೊಳ್ಳಿ. ಹಸಿವಿದ್ದರೆ ಊಟ ಸಿಗುತ್ತದೆ. ಸಾಧಿಸಬೇಕು ಎನ್ನುವುದಿದ್ದರೆ ದಾರಿಗಳು ಸಿಗುತ್ತವೆ. ಆ ಕಡೆಗೆ ಗಮನಹರಿಸಬೇಕು. ಮಜಾ ಕೂಡ ಮಾಡಬೇಕು. ಸಣ್ಣ ಸಣ್ಣ ಖುಷಿಗಳನ್ನೂ ಅನುಭವಿಸಿ. ಸ್ನೇಹಿತರೊಂದಿಗೆ ಕಾಲ ಕಳೆಯಿರಿ. ತುಂಬಾ ಗಂಭೀರವಾಗಬೇಡಿ’ ಎಂದು ಯುವಜನರಿಗೆ ಸಲಹೆ ನೀಡಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಟ್ ಎಂದು ನಿರ್ಧಾರ ಮಾಡುತ್ತಾರೆ. ಅವರ ಯೋಜನೆಗಳನ್ನೆಲ್ಲ ಅನುಷ್ಠಾನಕ್ಕೆ ತರುವ ಶಕ್ತಿಯನ್ನು ದೇವರು ನೀಡಲಿ’ ಎಂದು ಪ್ರಾರ್ಥಿಸಿದರು. ‘ಹೊರಗಡೆ ಸಾವಿರ ನಡೆಯಬಹುದು. ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಕೆಲಸ ಮಾಡುವವರಿಗೆ ರಾಜಕೀಯ ಶಕ್ತಿಯನ್ನು ಜನರೇ ಕೊಡುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT