ಸಾಲಿಗ್ರಾಮ: ಕೆ.ಆರ್.ನಗರ ತಾಲ್ಲೂಕಿನ ಪ್ರವಾಸಿ ಕೇಂದ್ರ ಚುಂಚನಕಟ್ಟೆ ಗ್ರಾಮದ ಹೊರವಲಯದಲ್ಲಿ ಹರಿಯುವ ಕಾವೇರಿ ನದಿಗೆ ನಿರ್ಮಿಸಿರುವ ಸೇತುವೆ ಮೇಲೆ ಮಳೆನೀರು ಹಾಗೂ ಗ್ರಾಮದ ಚರಂಡಿ ನೀರು ನಿಂತು ಈ ರಸ್ತೆಯಲ್ಲಿ ಓಡಾಡುವ ಪಾದಚಾರಿಗಳು ಹಾಗೂ ದ್ವಿಚಕ್ರ ಸವಾರರಿಗೆ ಬಹಳ ತೊಂದರೆಯಾಗುತ್ತಿದೆ.
ಮಳೆ ಬಂದರೆ ಸೇತುವೆ ಮೇಲೆ ಒಂದು ಅಡಿಯಷ್ಟು ನೀರು ನಿಲ್ಲುತ್ತಿದೆ. ಇದರ ಜತೆಗೆ ಗ್ರಾಮದ ಬಹುತೇಕ ಮನೆಗಳಿಂದ ಹೊರ ಬಿಡುವ ಗಲೀಜು ನೀರು ಕೂಡಾ ಚರಂಡಿಯಿಂದ ಹೊರ ಬಿದ್ದು ಸೇತುವೆ ಮೇಲೆ ನಿಲ್ಲುತ್ತಿರುವುದರಿಂದ ಬಹಳ ತೊಂದರೆ ಅನುಭವಿಸುತ್ತಿದ್ದಾರೆ.
ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಸೇತುವೆ ಮೇಲೆ ಓಡಾಡುವ ಸಮಯದಲ್ಲಿ ಬಸ್ ಅಥವಾ ಲಾರಿಗಳು ಬಂದರೆ ಮೈಮೇಲೆ ಕೊಳಚೆ ನೀರು ಸಿಡಿಯುವುದು ಎಂಬ ಭಯದಲ್ಲಿ ಅವಸರದಿಂದ ಓಡುವ, ವಾಹನ ಓಡಿಸುವ ಭರದಲ್ಲಿ ಅಪಘಾತಗಳು ಆಗುವ ಭಯವೂ ಕಾಡುತ್ತಿದೆ.
ಈ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್ಗಳ ಗಮನಕ್ಕೆ ಬಂದರೂ ಕಣ್ಣು ಮುಚ್ಚಿ ತಿರುಗುತ್ತಿದ್ದಾರೆ ಎಂದು ಪಾದಚಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಚುಂಚನಕಟ್ಟೆ ಗ್ರಾಮವನ್ನು ಪ್ರವಾಸಿ ಕೇಂದ್ರವನ್ನಾಗಿ ಘೋಷಣೆ ಮಾಡಿ ರಸ್ತೆ ಡಾಂಬರೀಕರಣ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿದ್ದರೂ ಕೂಡಾ ಈ ಸಮಸ್ಯೆಗೆ ಸ್ಪಂದಿಸದಿರುವುದು ಎಷ್ಟು ಸರಿ ಎಂಬುದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.