ಮೈಸೂರು: ನಂಜನಗೂಡು ತಾಲ್ಲೂಕಿನ ಸುತ್ತೂರಿನ ವೀರಸಿಂಹಾಸನ ಮಠದ ಸ್ಥಾಪಾನಾಚಾರ್ಯ ಶಿವರಾತ್ರೀಶ್ವರ ಅವರ 1060ನೇ ಜಯಂತಿ ಮಹೋತ್ಸವ ಮಂಗಳವಾರ ಸುತ್ತೂರಿನಲ್ಲಿ ನೆರವೇರಿತು.
ಸುತ್ತೂರಿನ ಮೂಲಮಠದ ಆವರಣದಲ್ಲಿ ಸಚಿವ ಸೋಮಣ್ಣ ಶಿವರಾತ್ರೀಶ್ವರ ಅವರ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಿದರು.
ನಂದಿಕಂಬ, ಡೊಳ್ಳು ಕುಣಿತ, ಕೋಲಾಟ, ಬೀಸುಕಂಸಾಳೆ, ವೀರಗಾಸೆ, ಪಟದ ಕುಣಿತ, ಪೂಜಾ ಕುಣಿತಗಳ ಮೂಲಕ ಶಿವರಾತ್ರೀಶ್ವರ ಅವರ ಮೂರ್ತಿಯನ್ನು ಸುತ್ತೂರಿನಲ್ಲಿ ಮೆರವಣಿಗೆ ಮಾಡಲಾಯಿತು. ಜೆಎಸ್ಎಸ್ ಲಲಿತಾಕಲಾ ವೃಂದದ ಕಲಾವಿದರು ವಚನಗಾಯನವನ್ನು ಪ್ರಸ್ತುತಪಡಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಣ್ಣ, ‘ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಸರಿಯಾದ ಅರಿವು ಇರಬೇಕು. ಅರಿವಿಲ್ಲದೆ ಪ್ರತಿಭಟನೆ ಮಾಡಬಾರದು. ಎಲ್ಲದ್ದಕ್ಕೂ ಇತಿಮಿತಿಗಳು ಇರಬೇಕು’ ಎಂದು ಹೇಳಿದರು.
‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನುಡಿದಂತೆ ನಡೆಯುತ್ತಾರೆ. ಉಪ ಚುನಾವಣೆಯಲ್ಲಿ ಗೆದ್ದವರನ್ನು, ಸೋತವರನ್ನೂ ಜತೆಗೆ ಕರೆದುಕೊಂಡು ಹೋಗುತ್ತಾರೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ’ ಎಂದು ತಿಳಿಸಿದರು.