ಮೈಸೂರು: ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದರಿಂದ ಮಾತ್ರ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಷಣದಲ್ಲಿ ಒತ್ತಿ ಹೇಳುತ್ತಿದ್ದರೂ ಸಾರ್ವಜನಿಕರು ಮಾತ್ರ ಇದನ್ನು ಪಾಲಿಸುತ್ತಿಲ್ಲ. ಜಿಲ್ಲಾಡಳಿತವೂ ದಿನಸಿ, ಔಷಧ ಅಂಗಡಿಗಳ ಮುಂದೆ ‘ಬಾಕ್ಸ್’ ಸ್ವರೂಪದ ಆಕೃತಿ ಬರೆದು ಸಾಮಾಜಿಕ ಅಂತರದ ಕುರಿತು ಎಚ್ಚರಿಕೆ ನೀಡಿದ್ದರೂ ಜನರು ಪರಿಗಣಿಸುತ್ತಿಲ್ಲ.
ಸಂಜೆಯಾದರೆ ಬಹುತೇಕ ಬಡಾವಣೆಗಳ ಗಲ್ಲಿಗಲ್ಲಿಗಳಲ್ಲಿ ಹೊರ ಗಡೆ ಕೂರುವ ಪುರುಷರು ಮತ್ತು ಮಹಿಳೆಯರು ಅಕ್ಕಪಕ್ಕವೇ ಕುಳಿತು ಹರಟೆಯಲ್ಲಿ ತೊಡಗುತ್ತಿದ್ದಾರೆ. ಮಕ್ಕಳಂತೂ ಸಾಮೂಹಿಕವಾಗಿ ಹಾಡಿ, ಕುಣಿದು ಕುಪ್ಪಳಿಸುತ್ತಿದ್ದಾರೆ. ಇವೆಲ್ಲವೂ ಕೊರೊನಾ ವೈರಸ್ ಹರಡುವಿಕೆಗೆ ಮಾಧ್ಯಮಗಳಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಪುರುಷರು ಅಂಗಡಿಗಳ ಮುಂದೆ, ಗಲ್ಲಿಯ ನಿರ್ದಿಷ್ಟ ಮನೆಯ ಮುಂದಿನ ಜಗುಲಿಗಳಲ್ಲಿ, ಕಾಂಪೌಂಡ್ ಬಳಿ ಕುಳಿತು ಮಾತುಕತೆಗೆ ತೊಡಗಿದರೆ, ಮಹಿಳೆಯರು ಮನೆಗಳ ಅಂಗಳದಲ್ಲಿ ಗುಂಪಾಗಿ ಕುಳಿತು ಮಾತನಾಡುತ್ತಿದ್ದಾರೆ. ಬೇಸಿಗೆಯ ಸೆಖೆಯಿಂದಾಗಿ ಈ ಹರಟೆ ತಡರಾತ್ರಿಯವರೆಗೂ ಮುಂದು ವರಿಯುತ್ತಿದೆ.
ಮಕ್ಕಳು, ಯುವಕರು ಕಬಡ್ಡಿ, ಕ್ರಿಕೆಟ್ ಮೊದಲಾದ ಆಟಗಳಲ್ಲಿ ತಲ್ಲೀನರಾ ಗುತ್ತಿದ್ದಾರೆ. ಒಂದೇ ಚೆಂಡನ್ನು ತಮ್ಮ ಬೆವರಿನಿಂದ ಒರೆಸಿ ಎಸೆಯುತ್ತಿದ್ದಾರೆ. ಇಂಥ ಚಟುವಟಿಕೆಗಳು ಇನ್ನೂ ಪೊಲೀಸರ ಕಣ್ಣಿಗೆ ಬಿದ್ದಿಲ್ಲ.
ನಂಜನಗೂಡಿನ ಕಾರ್ಖಾನೆ ಯೊಂದರಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯು ಯಾವುದೇ ಸೋಂಕಿತರ ಸಂಪರ್ಕ ಇಲ್ಲದಿದ್ದರೂ, ವಿದೇಶ ಪ್ರಯಾಣ ಮಾಡದೇ ಇದ್ದರೂ ಸೋಂಕಿತರಾದ ವಿಷಯ ಹರಡುತ್ತಿದ್ದಂತೆ ಕೆಲವೆಡೆ ಎಚ್ಚೆತ್ತ ಸಾರ್ವಜನಿಕರು ಮನೆಯಿಂದ ಹೊರಗಡೆ ಬರುವುದನ್ನು ಕಡಿಮೆ ಮಾಡಿದ್ದಾರೆ. ಆದರೂ, ಇನ್ನೂ ಹಲವು ಭಾಗಗಳಲ್ಲಿ ಈ ಸಾಮೂಹಿಕ ಚರ್ಚೆ ನಡೆದೇ ಇದೆ.