ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಹಣ: ಅರಿವಿನ ಅಭಿಯಾನ

Last Updated 20 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಸೂರ್ಯ ಗ್ರಹಣವನ್ನು ಒಂದು ವೈಜ್ಞಾನಿಕ ಪ್ರಕ್ರಿಯೆ ಎಂದು ಭಾವಿಸದೇ ಮೌಢ್ಯದ ಭಾಗವಾಗಿ ನೋಡುವುದು ಈಗಲೂ ನಮ್ಮ ಸಮಾಜದಲ್ಲಿದೆ. ಆದರೆ, ಅದೊಂದು ನೆರಳು – ಬೆಳಕಿನ ಆಟವೆಂದು ಕಲಿಕೆಯ ಭಾಗವಾಗಿ ಅರಿವು ಮೂಡಿಸುವ ಪ್ರಯತ್ನವೊಂದು ಮೈಸೂರಿನಲ್ಲಿ ವಿಭಿನ್ನವಾಗಿ
ನಡೆಯುತ್ತಿದೆ.

ಭಾರತದಲ್ಲಿ ಸೂರ್ಯಗ್ರಹಣವು ಡಿ.26ರಲ್ಲಿ ಘಟಿಸುತ್ತಿರುವುದು ವಿಶೇಷ. ಈ ರೀತಿಯ ಮತ್ತೊಂದು ಸೂರ್ಯಗ್ರಹಣ ಬರಬೇಕಾದರೆ ದಶಕಗಳೇ ಕಾಯಬೇಕಾಗಿ ಬರಬಹುದು. ಹಾಗಾಗಿ, ಇಂತಹ ಸನ್ನಿವೇಶವನ್ನು ಕಳೆದುಕೊಳ್ಳಬಾರದು; ಬದಲಿಗೆ ಅದಕ್ಕೆ ಸಾಕ್ಷಿಯಾಗಿ ಸಂಶೋಧನೆಯ ಭಾಗವಾಗಿ ಅದನ್ನು ಬಳಸಿಕೊಳ್ಳಬೇಕು ಎನ್ನುವುದುವಿಜ್ಞಾನಿಗಳ ಆಶಯ.

ವಾಸ್ತವದಲ್ಲಿ ಇದೊಂದು ಬೆಲೆ ಕಟ್ಟಲಾಗದ ವೈಜ್ಞಾನಿಕ ಪ್ರಕ್ರಿಯೆ. ಭೂಮಿಯ ಒಂದಲ್ಲಾ ಒಂದು ಕಡೆ ಸೂರ್ಯ ಗ್ರಹಣ ಆಗಾಗ ಘಟಿಸುತ್ತಿರುತ್ತದೆ. ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಬಂದಾಗ ಗ್ರಹಣ ಉಂಟಾಗುತ್ತದೆ. ಪರಿಪೂರ್ಣ ಕತ್ತಲು ಆವರಿಸಿದರೆ ಅದು ಸಂಪೂರ್ಣ ಅಥವಾ ಖಗ್ರಾಸ ಸೂರ್ಯಗ್ರಹಣ. ಸೂರ್ಯನ ಮಧ್ಯೆ ಚಂದ್ರ ಬಂದಾಗ ಉಂಗುರದಂತೆ ಪ್ರಭೆ ಕಾಣುವುದು ಸೂರ್ಯಗ್ರಹಣ. ಈ ವೈಜ್ಞಾನಿಕ ಪ್ರಕ್ರಿಯೆಯನ್ನು ವೀಕ್ಷಿಸಲು ವಿಜ್ಞಾನಿಗಳು ಲಕ್ಷಾಂತರ ಕಿಲೋಮೀಟರುಗಳನ್ನು ಕ್ರಮಿಸಿ ಸಾಕ್ಷಿಯಾಗುತ್ತದೆ. ಗ್ರಹಣ ಉಂಟಾದಾಗ ಪರಿಸರದಲ್ಲಾಗುವ ಬದಲಾವಣೆಗಳನ್ನು ದಾಖಲಿಸುತ್ತಾರೆ. ಗ್ರಹಣ ಏರ್ಪಟ್ಟಾಗ ಉಷ್ಣಾಂಶದಲ್ಲಾಗುವ ಇಳಿಕೆ, ಪ್ರಾಣಿ- ಪಕ್ಷಿಗಳ ವರ್ತನೆಯಲ್ಲಾಗುವ ಬದಲಾವಣೆಗಳನ್ನು ದಾಖಲಿಸಿ ಸಂಶೋಧಿಸುತ್ತಾರೆ. ಆದರೆ, ನಮ್ಮ ಅದೃಷ್ಟವೇನೆಂದರೆ, ನಾವು ಕುಳಿತಲ್ಲೇ ಗ್ರಹಣ ಏರ್ಪಡುತ್ತಿದೆ. ನಾವಿದನ್ನು ನೋಡಲು ಕಿಲೋಮೀಟರುಗಟ್ಟಲೇ ಸಂಚರಿಸಬೇಕಿಲ್ಲ. ನಾವು ಕುಳಿತಲ್ಲೇ, ನಮ್ಮ ಮನೆ, ಕಚೇರಿಯಿಂದಲೇ ಗ್ರಹಣವನ್ನು ಕಾಣಬಹುದು. ಆದರೆ, ಕಣ್ಣಿನ ರಕ್ಷಣೆಗೆ ವಿಶೇಷವಾದ ಕನ್ನಡಕವೊಂದನ್ನು ಮಾತ್ರ ಕಡ್ಡಾಯವಾಗಿ ಧರಿಸಲೇಬೇಕು.

ಈ ರೀತಿಯ ವಿಶೇಷವಾದ ಪ್ರಾಕೃತಿಕ ಸನ್ನಿವೇಶವನ್ನು ದಾಖಲಿಸಿ ವೈಜ್ಞಾನಿಕ ತಿಳಿವಳಿಯನ್ನು ಮಕ್ಕಳಿಗೆ ನೀಡುವ ಕೆಲಸವನ್ನು ಮೈಸೂರು ವಿಜ್ಞಾನ ಪ್ರತಿಷ್ಠಾನವು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮೈಸೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಾಡುತ್ತಿದೆ. ಪ್ರತಿಷ್ಠಾನವು ಮೈಸೂರು ವಿಶ್ವವಿದ್ಯಾಲಯದ ಓವೆಲ್‌ ಮೈದಾನದ ಆವರಣದಲ್ಲಿ ಸೂರ್ಯಗ್ರಹಣ ವೀಕ್ಷಣೆ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಡಿ. 26ರಂದುಹಮ್ಮಿಕೊಂಡಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಬಿಇಒ ದಕ್ಷಿಣ ಹಾಗೂ ಉತ್ತರ ವತಿಯಿಂದ ಸುಮಾರು 50 ಶಾಲೆಗಳಿಂದ 2 ಸಾವಿರ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೂರ್ಯಗ್ರಹಣವನ್ನು ವೀಕ್ಷಿಸಲಿದ್ದಾರೆ. ಇದಕ್ಕಾಗಿಯೇ ವಿಶೇಷವಾಗಿ ತರಿಸಿರುವ ವಿಶೇಷವಾದ ಕನ್ನಡಕವನ್ನು ಮಕ್ಕಳು ಸೇರಿದಂತೆ ಭಾಗವಹಿಸುವ ಎಲ್ಲರಿಗೂ ನೀಡಲಾಗುತ್ತಿರುವುದು ವಿಶೇಷ.

ಮೌಢ್ಯ ತೊಳೆಯುವ ಪ್ರಯತ್ನ: ಸೂರ್ಯಗ್ರಹಣ ಹಾಗೂ ಮೌಢ್ಯಕ್ಕೂ ನಮ್ಮ ಸಮಾಜದಲ್ಲಿ ಸಾಕಷ್ಟು ತಳುಕಿದೆ. ಇದನ್ನು ತೊಡೆದುಹಾಕುವ ಪ್ರಯತ್ನವನ್ನು ಮೈಸೂರು ವಿಜ್ಞಾನ ಪ್ರತಿಷ್ಠಾನವು ಮಾಡುತ್ತಿದೆ ಎಂದು ಪ್ರತಿಷ್ಠಾನದ ಸಂಚಾಲಕ ಸಂತೋಷ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸೂರ್ಯಗ್ರಹಣ ಘಟಿಸುವಾಗ ಆಚೆ ಬರಬಾರದು, ಸೂರ್ಯ ಗ್ರಹಣವನ್ನು ವೀಕ್ಷಿಸಿದರೆ ಶಾಪಕ್ಕೆ ಗುರಿಯಾಗಬೇಕಾಗುವುದು ಎನ್ನುವ ಮೌಢ್ಯವನ್ನು ತೊಲಗಿಸಿ ಸೂರ್ಯಗ್ರಹಣ ನೋಡಲೇಬೇಕಾದ ಸನ್ನಿವೇಶಗಳಲ್ಲಿ ಒಂದು ಎಂದು ಸಾರುವ ಕೆಲಸವನ್ನು ಮಾಡಲಾಗುತ್ತಿದೆ. ಪೋಷಕರು, ಶಿಕ್ಷಕರು ಇದರಲ್ಲಿ ಪಾಲ್ಗೊಂಡು ವಿಜ್ಞಾನದ ಅರಿವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಆಶಯದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿವರ ನೀಡಿದರು.

ತರಬೇತಿಯೂ ಉಂಟು: ಸೂರ್ಯಗ್ರಹಣವನ್ನು ವೀಕ್ಷಿಸುವಾಗ ಕಣ್ಣಿಗೆ ಹಾನಿಯಾಗದೇ ಇರಲಿ ಎಂಬ ಉದ್ದೇಶದಿಂದ ನಗರದ ವಿಜಯವಿಠ್ಠಲ ಪಿಯು ಕಾಲೇಜಿನಲ್ಲಿ ಡಿ. 23ರಂದು ತರಬೇತಿ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಸೌರ ಕನ್ನಡದ ಬಳಕೆ, ನೋಡಬೇಕಾದ ವಿಧಾನವನ್ನು ತಿಳಿಸಲಾಗುವುದು. ಸೂರ್ಯನ ಸುತ್ತ ಉಂಗುರ ಉಂಟಾದಾಗ ಬೆಳಕಿನ ವಕ್ರೀಭವನ ಆಗುವ ಕಾರಣ, ತೀಕ್ಷ್ಣತೆ ಇರುತ್ತದೆ. ಹಾಗಾಗಿ, ಖಾಲಿ ಕಣ್ಣಿನಲ್ಲಿ ವೀಕ್ಷಿಸಿದರೆ ಅಪಾಯ ಉಂಟಾಗಬಲ್ಲದು. ಈ ಕಾರಣದಿಂದಾಗಿ ವಿಶೇಷ ಕನ್ನಡಕ ಬಳಸಬೇಕಷ್ಟೇ. ಈ ವೈಜ್ಞಾನಿಕ ವಿಧಾನವನ್ನು ಮಕ್ಕಳಿಗೆ ಕಲಿಸಿ, ಸೂರ್ಯಗ್ರಹಣದ ದಿನದಂದು ಬಳಸುವಂತೆ ಹೇಳಿಕೊಡಲಾಗುವುದು. ಇದಕ್ಕಾಗಿ ವಿಜ್ಞಾನಿಗಳು ನಮಗೆ ಬೆಂಬಲ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಅರಿವು!: ಗ್ರಹಣ ಸಂದರ್ಭದಲ್ಲಿ ಏನನ್ನೂ ತಿನ್ನಬಾರದು ಎಂಬ ಮೌಢ್ಯವೂ ಇದೆ. ಇದನ್ನು ಕಳೆಯಲೆಂದೇ ಎಲ್ಲ ಮಕ್ಕಳಿಗೂ ಉಚಿತವಾಗಿ ಬಿಸ್ಕೆಟ್‌ ವಿತರಿಸಿ ತಿನ್ನುವಂತೆ ಪ್ರೇರೇಪಿಸುವ ಕೆಲಸವೂ ಅಂದು ನಡೆಯುತ್ತಿದೆ. ಭಾಗವಹಿಸುವ ಎಲ್ಲ ಮಕ್ಕಳಿಗೂ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ.

‘ಸೂರ್ಯಗ್ರಹಣವನ್ನು ಓವೆಲ್‌ ಮೈದಾನಕ್ಕೇ ಬಂದು ವೀಕ್ಷಿಸಬೇಕು ಎಂದೇನೂ ಇಲ್ಲ. ಮನೆಯ ಅಂಗಳದಿಂದಲೇ ನೋಡಬಹುದು. ಆದರೆ, ಸೌರ ಕನ್ನಡಕ ಕಡ್ಡಾಯವಾಗಿ ಬಳಸಬೇಕು’ ಎಂದುಮೈಸೂರು ವಿಜ್ಞಾನ ಪ್ರತಿಷ್ಠಾನದ ಸಂಚಾಲಕ ಸಂತೋಷ್ ಕುಮಾರ್ ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT