ಮೈಸೂರು: ಬಹುಜನ ವಿದ್ಯಾರ್ಥಿ ಸಂಘದ (ಬಿವಿಎಸ್) ವತಿಯಿಂದ ನಡೆಯುತ್ತಿರುವ ಸಂವಿಧಾನ ಜಾಗೃತಿ ಅಭಿಯಾನದ ಅಂಗವಾಗಿ, ಸಂವಿಧಾನ ಕುರಿತ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.
‘ಭಾರತೀಯ ಸಮಾಜ ಪರಿವರ್ತನೆಯಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳ ಪಾತ್ರ’ ವಿಷಯವಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ, ‘ಭಾರತ ಸಂವಿಧಾನ ಪ್ರಸ್ತಾವನೆಯ ಮಹತ್ವ’ ವಿಷಯವಾಗಿ ಪಿಯುಸಿ ಹಾಗೂ ತತ್ಸಮಾನ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ಹಾಗೂ ‘ಭಾರತ ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪಾತ್ರ’ ವಿಷಯವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಪದವಿ/ಸ್ನಾತಕೋತ್ತರ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ, ಕ್ರಮವಾಗಿ ₹ 1 ಲಕ್ಷ, ₹ 50 ಸಾವಿರ ಹಾಗೂ ₹25 ಸಾವಿರ ನಗದು ಬಹುಮಾನ ನೀಡಲಾಗುವುದು. ಪಿಯುಸಿ ವಿಭಾಗದಲ್ಲಿ ಕ್ರಮವಾಗಿ ₹50 ಸಾವಿರ, ₹ 25 ಸಾವಿರ ಹಾಗೂ ₹15 ಸಾವಿರದಂತೆ ನಗದು ಬಹುಮಾನವಿದೆ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಕ್ರಮವಾಗಿ ₹ 25 ಸಾವಿರ, ₹ 15 ಸಾವಿರ, ₹ 5 ಸಾವಿರ ನಗದು ಬಹುಮಾನ ನೀಡಲಾಗುವುದು. ಎಲ್ಲ ವಿಭಾಗಗಳಲ್ಲಿ ತಲಾ ಹತ್ತು ಮಂದಿಗೆ ಸಮಾಧಾನಕರ ಬಹುಮಾನ ಲಭಿಸಲಿದೆ ಎಂದು ಸಂಘದ ಜಿಲ್ಲಾ ಸಂಯೋಜಕ ಎಚ್.ಎಸ್.ಗಣೇಶ್ಮೂರ್ತಿ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಬಂಧವನ್ನು 2020ರ ಜ.10ರೊಳಗಾಗಿ, # 764, ಮಾಯಾನಂದನ, 8ನೇ ಅಡ್ಡರಸ್ತೆ, ಜೈನ್ ಹಾಸ್ಟೆಲ್ ರಸ್ತೆ, ನಾಗಲಿಂಗೇಶ್ವರ ದೇವಸ್ಥಾನದ ಹತ್ತಿರ, ಟಿ.ಕೆ.ಬಡಾವಣೆ, ಮೈಸೂರು–09 ಈ ವಿಳಾಸಕ್ಕೆ ತಲುಪಿಸಬೇಕು. ಮಾಹಿತಿಗೆ ಮೊ: 94485 44404 ಸಂಪರ್ಕಿಸಬಹುದು.