ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾ ಹಾಸ್ಯ ರಸಾಯನ; ನಗೆಗಡಲು

ಸ್ವಾವಲಂಬಿ ಬದುಕಿಗೂ ಸಹಕಾರ ಕೊಡಿ–ವಿದ್ಯಾ ಅರಸ್
Last Updated 1 ಅಕ್ಟೋಬರ್ 2019, 13:57 IST
ಅಕ್ಷರ ಗಾತ್ರ

ಮೈಸೂರು: ಮಹಿಳಾ ದಸರಾದಲ್ಲಿ ಮಂಗಳವಾರ ನಗೆ ಹೊನಲು. ಬರೋಬ್ಬರಿ ಒಂದು ತಾಸು ವಾಗ್ಮಿ ಸುಧಾ ಬರಗೂರು ತಮ್ಮ ಮಾತಿನ ಲಹರಿ ಹರಿಸಿದ್ದಕ್ಕೆ ಚಪ್ಪಾಳೆಯ ಪ್ರಶಂಸೆ. ಇಡೀ ಸಭಾಂಗಣವೇ ನಗೆಗಡಲಲ್ಲಿ ತೇಲಿತು.

ಸುಧಾ ತಮ್ಮ ಮಾತಿನುದ್ದಕ್ಕೂ ಕಚಗುಳಿಯಿಡುವ ನಗೆ ಬಾಂಬ್‌ಗಳನ್ನು ಸಿಡಿಸಿದರು. ಬರಗೂರರ ನವಿರಾದ ಹಾಸ್ಯಕ್ಕೆ ನೆರೆದಿದ್ದ ಮಹಿಳಾ ಸಮೂಹ ನಗೆಗಡಲಲ್ಲಿ ಮಿಂದೆದಿತ್ತು. ಆರಂಭದಿಂದ ಅಂತ್ಯದವರೆಗೂ ನಗೆಯ ಅಲೆ ಸಭಾಂಗಣದಿಂದ ಹೊರಹೊಮ್ಮಿತು.

ಈ ಹಿಂದೆ ಮನೆಗಳಿಗೆ ಹೋಗುತ್ತಿದ್ದಂತೆ ಕುಡಿಯಲು ನೀರು ಕೇಳುತ್ತಿದ್ದರು–ಕೊಡುತ್ತಿದ್ದರು. ಇದೀಗ ಚಾರ್ಜರ್‌ ಕೇಳೋ ಕಾಲ ಬಂದಿದೆ. ಸೆಲ್ಫಿಯ ಗೀಳು, ಫೇಸ್‌ಬುಕ್‌–ವಾಟ್ಸ್‌ ಆ್ಯಪ್‌ ಸೆಳೆತ, ಕಿಟ್ಟಿ ಪಾರ್ಟಿಗಳ ಬದಲಾವಣೆ, ಫೋಟೊ ಸೆಷನ್‌ಗಳು, ಫೋಟೊಗ್ರಾಫರ್‌ಗಳ ಸೂಚನೆಗಳು, ಮೌಲ್ಯದ ಅರ್ಥ ಬದಲಾದದ್ದು ಸೇರಿದಂತೆ ಹತ್ತು ಹಲವು ವಿಷಯಗಳನ್ನು ಸಭಿಕರೆದುರು ನವಿರಾಗಿ ಪ್ರಸ್ತುತ ಪಡಿಸಿದ ಸುಧಾ, ಎಲ್ಲರ ಮೊಗದಲ್ಲೂ ನಗೆಯರಳಿಸಿದರು.

ಬರಗೂರರ ಹಾಸ್ಯ ರಸಾಯನ ಸವಿಯಲು ಮಹಿಳಾ ದಸರಾ ಸಭಾಂಗಣ ಭರ್ತಿಯಾಗಿತ್ತು. ಹಲವರು ನಿಂತೇ ನಗೆ ಚಟಾಕಿಗಳನ್ನು ಕೇಳಿದರು. ಮನಸಾರೆ ನಕ್ಕರು.

ನಗೆ ಹೊನಲು ಬಳಿಕ ಜನಪದ ಗೀತೆ, ಸಮೂಹ ನೃತ್ಯ, ಸಾಂಪ್ರದಾಯಿಕ ವಧು–ವರರ ಫ್ಯಾಷನ್ ಶೊ, ತಾಯಿ–ಮಗಳ ಫ್ಯಾಷನ್ ಶೊ, ದೇಸಿ ಗರ್ಲ್‌ ಫ್ಯಾಷನ್ ಶೊ, ನೃತ್ಯ ರೂಪಕ, ಗುಂಪುಗಾಯನ ನಡೆದವು.

ಸಹಕಾರ ಕೊಡಿ: ಜಾನಪದ ಸಿರಿ ಸಮಾರಂಭ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ಅಧ್ಯಕ್ಷರಾದ ವಿದ್ಯಾ ಅರಸ್ ಮಾತನಾಡಿ ‘ಸ್ವಸಹಾಯ ಗುಂಪುಗಳು ಕೇವಲ ಹಣ ಉಳಿತಾಯ ಮಾಡುವ ಉದ್ದೇಶದಿಂದ ಕೆಲಸ ಮಾಡದೇ, ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕಲು ಸ್ವ ಉದ್ಯೋಗ ಮಾಡಲು ಸಹಕಾರ ನೀಡಬೇಕು’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ಉಪಾಧ್ಯಕ್ಷೆ ರತ್ನಾ ಲಕ್ಷ್ಮಣ್, ಡಾ.ಪ್ರೇಮ್‌ಕುಮಾರ್, ರೂಪಾ, ರುಕ್ಮಿಣಿ, ನಳಿನಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT