ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ತೃತೀಯ ಲಿಂಗಿಗಳ ಮಸೂದೆ ವಿರುದ್ಧ ಆಶೋದಯ ಸಮಿತಿಯ ನೇತೃತ್ವದಲ್ಲಿ ತೃತೀಯ ಲಿಂಗಿಗಳು ನಗರದಲ್ಲಿ ಪ್ರತಿಭಟನಾ ಜಾಥಾ ನಡೆಸಿದರು.
ಈ ಮಸೂದೆಯಲ್ಲಿರುವ ಹಲವು ಅಂಶಗಳು ತೃತೀಯ ಲಿಂಗಿಗಳ ಪಾಲಿಗೆ ಕರಾಳ ಎನಿಸಿವೆ. ಕೂಡಲೇ ಈ ಮಸೂದೆಯನ್ನು ವಾಪಸ್ ಪಡೆಯಬೇಕು ಎಂದು ಅವರು ಒಕ್ಕೊರಲಿನಿಂದ ಆಗ್ರಹಿಸಿದರು.
ತೃತೀಯ ಲಿಂಗಿಗಳೆಂದು ಕೇವಲ ವ್ಯಕ್ತಿಯ ಬಾಹ್ಯ ಲಕ್ಷಣಗಳ ಆಧಾರದ ಮೇಲೆ ಹೇಳುವುದು, ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಪ್ರಮಾಣಪತ್ರ ನೀಡುವುದು ಸೇರಿದಂತೆ ಹಲವು ಅಂಶಗಳು ತೀರಾ ಅವೈಜ್ಞಾನಿಕವಾಗಿದೆ ಹಾಗೂ ಗೌಪ್ಯತೆ ಇದರಲ್ಲಿ ಇಲ್ಲ ಎಂದು ಅವರು ಆರೋಪಿಸಿದರು.
ತೃತೀಯ ಲಿಂಗಿಗಳಿಗೆ ಉದ್ಯೋಗ, ಶಿಕ್ಷಣಗಳಲ್ಲಿ ತಾರತಮ್ಯ ಮಾಡಬಾರದು ಎಂದು ಮಸೂದೆ ಹೇಳಿದೆ. ಆದರೆ, ಮೀಸಲಾತಿಯನ್ನು ಕಲ್ಪಿಸಿಲ್ಲ. ಮೀಸಲಾತಿ ಇಲ್ಲದೇ ಉದ್ಯೋಗವಾಗಲಿ, ಶಿಕ್ಷಣವಾಗಲಿ ತೃತೀಯ ಲಿಂಗಿಗಳಿಗೆ ಸಿಗುವುದು ದುಸ್ತರ ಎಂದು ಅವರು ಅಭಿಪ್ರಾಯಪಟ್ಟರು.
ಕೂಡಲೇ ಈ ಮಸೂದೆ ಕುರಿತು ಹೆಚ್ಚಿನ ಚರ್ಚೆಯಾಗಬೇಕು. ಹಲವು ಅಂಶಗಳು ಬದಲಾವಣೆಯಾಗಬೇಕಿದೆ. ತರಾತುರಿಯಲ್ಲಿ ಈ ಮಸೂದೆ ಜಾರಿ ಬೇಡ ಎಂದು ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.