ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗ ಭಯಕ್ಕಿಂತ ಹಸಿವಿನದ್ದೇ ಚಿಂತೆ

ಸ್ವ ಉದ್ಯೋಗವನ್ನೂ ಕಸಿದುಕೊಂಡ ಕೋವಿಡ್–19 ಲಾಕ್‌ಡೌನ್: ಬದುಕಿನದ್ದೇ ಚಿಂತೆ...
Last Updated 17 ಮೇ 2021, 3:32 IST
ಅಕ್ಷರ ಗಾತ್ರ

ಮೈಸೂರು: ಒಂದೂಕಾಲು ವರ್ಷದಿಂದ ಜಗತ್ತನ್ನೇ ಕಾಡುತ್ತಿರುವ ಕೋವಿಡ್– 19 ಹಲವರ ಆರೋಗ್ಯವನ್ನೂ ಕೆಲವರ ಜೀವವನ್ನೂ ಕಸಿದುಕೊಂಡಿದೆ. ಆದರೆ, ಬಹುಪಾಲು ಜನರ ನಿತ್ಯದ ಉದ್ಯೋಗಕ್ಕೂ ಸಂಚಕಾರ ಉಂಟಾಗಿದ್ದರಿಂದ ಸ್ವಾಭಿಮಾನದ ಬದುಕು ಹೋಯಿತಲ್ಲ ಎಂಬ ಚಿಂತೆ ಒಂದೆಡೆ; ಇದೇ ಸ್ಥಿತಿಯನ್ನು ಸರ್ಕಾರ ಅನಿವಾರ್ಯವೆಂದು ಮುಂದುವರೆಸುತ್ತಾ ಹೋದರೆ ಜೀವನ ನಡೆಸುವುದು ಹೇಗೆ? ಎಂಬ ಬೃಹತ್‌ ಸವಾಲು ಹಲವರ ಮುಂದೆ ನಿಂತಿದೆ.

ಕಳೆದ ವರ್ಷ ಲಾಕ್‌ಡೌನ್‌ ವೇಳೆ ಎಲ್ಲ ಆಟೊ ಮತ್ತು ಕ್ಯಾಬ್‌ ಚಾಲಕರಿಗೆ ತಿಂಗಳಿಗೆ ₹ 5 ಸಾವಿರ ನೀಡುವುದಾಗಿ ಸರ್ಕಾರ ಹೇಳಿತ್ತು. ಹೆಸರು ನೋಂದಾಯಿಸಿಕೊಂಡು ಡಿಎಲ್‌, ಆಟೊ ಸಂಖ್ಯೆ ಪಡೆದುಕೊಂಡರು. ಆದರೆ, ಹಣ ಮಾತ್ರ ಬರಲೇ ಇಲ್ಲ. ಆಗ ಸಾಲವಾದರೂ ಸಿಕ್ಕಿತು. ಬದುಕು ಸಾಗಿತು. ಆದರೆ, ಈಗ ಸಾಲ ಕೊಡುವವರೂ ಇಲ್ಲ ಎನ್ನುತ್ತಾ ಹಲವರು ಸಂಕಷ್ಟದ ದಿನಗಳನ್ನು ಅನಾವರಣಗೊಳಿಸಿದರು.

ದಿನಗೂಲಿ ಬದುಕಿನಲ್ಲಿ ಜೀವನ ಸಾಗಿಸುವ ಆಟೊ, ಕ್ಯಾಬ್ (ಕಾರು) ಚಾಲಕರ ಬದುಕು ಸಂಕಷ್ಟದಲ್ಲಿದೆ. ಯಾರದೋ ಮಾಲೀಕತ್ವದ ಆಟೊವನ್ನು ದಿನದ ಬಾಡಿಗೆಯಂತೆ ಪಡೆದು ಪೆಟ್ರೋಲ್ ಅಥವಾ ಗ್ಯಾಸ್ ಹಾಕಿಸಿ ಓಡಿಸಿ, ಎಷ್ಟೇ ವ್ಯಾಪಾರವಾದರೂ ಮಾಲೀಕನಿಗೆ ನಿಯತ್ತಿನಿಂದ ದುಡ್ಡು ಕೊಟ್ಟು ಉಳಿದ ಪುಡಿಗಾಸಿನಲ್ಲಿ ಜೀವನ ನಡೆಸುತ್ತಿದ್ದವರ ಬದುಕು ಈಗ ಬೀದಿಗೆ ಬಿದ್ದಿದೆ.

ಬ್ಯಾಂಕ್, ಖಾಸಗಿ ಫೈನಾನ್ಸ್‌ಗಳಲ್ಲಿ ಸಾಲ ಪಡೆದು ಆಟೊ ಅಥವಾ ಕಾರು ತಂದು ನಿತ್ಯ ಹಗಲು– ರಾತ್ರಿಯೆನ್ನದೆ ಗ್ರಾಹಕರು ಸಿಕ್ಕಾಗ ಓಡಿಸಿ ಬ್ಯಾಂಕ್‌ ಕಂತು ಪಾವತಿಸುತ್ತಾ, ಕುಟುಂಬದವರೊಂದಿಗೆ ಎರಡುಹೊತ್ತು ಊಟ ಮಾಡಿ, ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತಾ, ‘ನಮ್ಮ ಮಕ್ಕಳು ನಮ್ಮ ಹಾಗೆ ಆಗದಿರಲಿ’ ಎಂದು ಅವರನ್ನು ಒಳ್ಳೆಯ ಶಾಲೆ, ಕಾಲೇಜಿಗೆ ಸೇರಿಸಿ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಿ ರೂಪುಗೊಂಡು, ನೌಕರಿ ಪಡೆಯಲಿ ಎಂಬ ಆಸೆ ಹೊಂದಿದ್ದ ಬಹುತೇಕ ಆಟೊ, ಕ್ಯಾಬ್ ಚಾಲಕರು ಈಗಿನ ಪರಿಸ್ಥಿತಿಯಲ್ಲಿ ಕೈಚೆಲ್ಲಿ ಕುಳಿತಿದ್ದಾರೆ. ಮಕ್ಕಳ ಭವಿಷ್ಯ ಬಿಡಿ, ತಮ್ಮ ಭವಿಷ್ಯದಲ್ಲೇ ಕತ್ತಲು ಕವಿದಿದೆ.
ಆಟೊ ಮತ್ತು ಕ್ಯಾಬ್ ಚಾಲಕರು ತಮ್ಮ ಬದುಕಿನ ಸಂಕಷ್ಟ, ಅನುಭವಿಸುತ್ತಿರುವ ಯಾತನೆಯನ್ನು ಹೀಗೆ ವಿವರಿಸುತ್ತಾರೆ....

ಹಸಿವಿನಿಂದ ಸಾವು ಬಂದಿತೆಂಬ ಭಯ...

‘ಸರ್ಕಾರ ಲಾಕ್‌ಡೌನ್‌ ಮಾಡಿದ್ದಕ್ಕೆ ನಮಗೆ ಸಿಟ್ಟು, ಬೇಸರವಿಲ್ಲ, ನಮ್ಮ ಒಳಿತಿಗೆ ಎಂದೇ ತಿಳಿದಿದ್ದೇವೆ. ಆದರೆ, ನಿತ್ಯದ ಕೂಲಿ ಹೋಗಿದ್ದರಿಂದ ಬದುಕುವುದು ಹೇಗೆ? ಕೊರೊನಾ ಸೋಂಕು ದೇಶದಲ್ಲಿ ಸಾವಿರಾರು ಜನರನ್ನು ಕೊಂದು ಹಾಕಿದೆ. ಚಿಕಿತ್ಸೆ ಸಿಗದೆ ಒದ್ದಾಡುವುದನ್ನು, ಆಮ್ಲಜನಕ ಸಿಗದೆ ಹಲವರು ಮೃತಪಟ್ಟಿದ್ದಾರೆ ಎಂದು ಕೇಳುತ್ತಿದ್ದೇವೆ. ಬಡ ಆಟೊ ಚಾಲಕರತ್ತ ಸರ್ಕಾರ ಕರುಣೆ ತೋರದಿದ್ದರೆ ಹಸಿವಿನಿಂದ ಸಾಯುವ ಸ್ಥಿತಿ ಬರಬಹುದು ಎಂಬ ಭಯ ನಮಗೆ ಶುರು ಆಗಿದೆ’ ಎಂದು ಆಟೊ ಚಾಲಕ ಪ್ರವೀಣಕುಮಾರ್ ಡಿ. ಆತಂಕ ವ್ಯಕ್ತಪಡಿಸಿದರು.

‘ಪೆಟ್ರೋಲ್‌, ಗ್ಯಾಸ್ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಜಾಸ್ತಿಯಾಗಿದೆ. ಆದರೆ, ಆಟೊ ಮಿನಿಮಮ್ ಮೀಟರ್ ಬೆಲೆ ಏರಿಸಲಿಲ್ಲ. ಹೀಗಾಗಿ ನಿತ್ಯ ದುಡಿದದ್ದು ಅವತ್ತಿಗೆ ಆಯಿತು. ಚೂರು ಪಾರು ಉಳಿದಿದ್ದು ಈಗ ಹತ್ತಾರು ದಿನಕ್ಕೆ ಸಾಕಾಯಿತು. ಬಾಡಿಗೆ ಕಟ್ಟುವುದೇ ಹೇಗೆ ಎಂಬ ಚಿಂತೆ ಒಂದೆಡೆಯಾದರೆ, ಮತ್ತೊಂದೆಡೆ ಬೆಳೆಯುವ ಮಕ್ಕಳಿಗೆ ಏನು ತರುವುದು ಎಂಬ ಚಿಂತೆ. ತಿಂಗಳಿಗೆ ಕನಿಷ್ಠ ₹ 5 ಸಾವಿರ ಎಂದು ಕೊಟ್ಟರೆ ಸಾಕು. ಗಂಜಿ ಕುಡಿದಾದರೂ ಬದುಕುತ್ತೇವೆ’ ಎಂದು ಹೇಳುತ್ತಾ ಕಣ್ಣೀರಾದರು.

ವಿಮೆ ಪಾವತಿಗೆ ಸಮಯ, ಒಂದು ಹೊತ್ತು ಊಟ ನೀಡಿ...

ಪ್ರಾಮಾಣಿಕವಾಗಿ ಬಾಡಿಗೆ ತೆಗೆದುಕೊಂಡು ಓಡಿಸಿದವರಿಗೆ ಕಾಲವೇ ಇಲ್ಲ ಎನ್ನುವ ಸ್ಥಿತಿ ಬಂದಿದೆ. ಮನೆಯಲ್ಲಿಯೇ ಇದ್ದೇನೆ. ದುಡಿಮೆ ಇಲ್ಲ. ಕಾಫಿ ತಿಂಡಿಗೂ ಸಮಸ್ಯೆಯಾಗಿದೆ. ಇನ್ಸುರೆನ್ಸ್‌ ತುಂಬುವ ಸಮಯ ಬಂದಿದೆ. ಅದಕ್ಕಾಗಿ ತುರ್ತಾಗಿ ಮೂರು ತಿಂಗಳಾದರೂ ರನ್ನಿಂಗ್ (ಕಂತು ಭರ್ತಿ ಮಾಡದಿದ್ದರೂ ಚಾಲ್ತಿ) ಕೊಡಿ. ಒಂದು ಹೊತ್ತು ಮನೆಯಲ್ಲಿ ಕುಳಿತು ಊಟ ಮಾಡಲು ಸಹಾಯ ಮಾಡಿ ಎಂದು ಆಟೊ ಚಾಲಕ ಪುಟ್ಟೇಗೌಡ ಕಷ್ಟ ಹೇಳಿಕೊಂಡರು.

‘ಇನ್ಸುರನ್ಸ್ ರನ್ನಿಂಗ್ ಇದ್ದರೆ, ಲಾಕ್‌ಡೌನ್‌ ಮುಗಿದ ಮೇಲಾದರೂ ಆಟೊ ರಸ್ತೆಗೆ ಬಂದಾಗ ಭಯವಿಲ್ಲದೆ ಓಡಿಸಬಹುದು. ದುಡಿದು ಕಂತು ಕಟ್ಟಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರ ಸಹಾಯ ನೀಡಲಿ

‘ಮನೆ ಬಿಟ್ಟು ಹೊರಗೆ ಹೋಗಿಲ್ಲ. ಲಾಕ್‌ಡೌನ್‌ 15 ದಿನವಾದರೆ ಹೇಗಾದರೂ ತಳ್ಳಿ ಬಿಡಬಹುದು. ಮುಂದುವರಿದರೆ ಬದುಕುವುದು ಹೇಗೆ ಎಂಬುದೇ ಚಿಂತೆಯಾಗಿದೆ. ದೊಡ್ಡವರು ರೇಶನ್‌ ಅಕ್ಕಿ, ರಾಗಿ ತಿಂದು ಕುಳಿತು ಬಿಡುತ್ತೇವೆ. ಬೆಳೆಯುವ ಮಕ್ಕಳಿಗೆ ಹಾಲು– ಹಣ್ಣಾದರೂ ಬೇಡವೇ? ಅದಕ್ಕಾದರೂ ಸರ್ಕಾರ ಲಾಕ್‌ಡೌನ್‌ ಪರಿಹಾರ ಎಂದು ₹ 5 ಸಾವಿರ ನೀಡಲಿ. ಅಥವಾ ಬಡ್ಡಿಯಿಲ್ಲದೆ ಹಣ ನೀಡಲಿ. ವಾತಾವರಣ ಸರಿಹೋದ ಮೇಲೆ ದುಡಿದು ತೀರಿಸುತ್ತೇವೆ’ ಆಟೊ ಚಾಲಕ ಜಗದೀಶ್ ರಾಜು ಹೇಳಿದರು.

ಬಡವರ ಕಷ್ಟ ನೋಡಿ ಸಹಾಯ ನೀಡಲಿ

‘ಕೆಲಸ ನಡೆಯುವಾಗ ಬದುಕುವುದು ಕಷ್ಟವೆನಿಸಲಿಲ್ಲ. ಆದರೆ, ಒಂದೊಂದೇ ಕೆಲಸ ಎಂದವರನ್ನು ಕೊರೊನಾ ಬದುಕುವುದಕ್ಕೆ ಬಿಡುತ್ತಿಲ್ಲ. ರೋಗ ಹರಡಬಾರದು ಎಂದು ಸರ್ಕಾರ ಮಾಡಿದ್ದು ಸರಿ. ಆದರೆ, ಬಡವರನ್ನು ಬದುಕಿಸಲು ಸಹಾಯ ಹಸ್ತ ನೀಡಲಿ. ಎಲ್ಲರಿಗೂ ಸಹಾಯ ಮಾಡಲಿ ಎಂದಲ್ಲ. ಕನಿಷ್ಠ ಪಕ್ಷ ಕಷ್ಟದಲ್ಲಿರುವ ಆಟೊ ಚಾಲಕರ ಬಡ ಕುಟುಂಬಕ್ಕೆ ಸಹಾಯ ಹಸ್ತ ಚಾಚಲಿ. ಅಗತ್ಯ ದಿನಸಿ ನೀಡಿದರೂ ಬದುಕಬಹುದು. ಅಷ್ಟಾದರೂ ರಾಜ್ಯ ಸರ್ಕಾರ ಮಾಡಲಿ. ನೆರೆಯ ಆಂಧ್ರಪ್ರದೇಶ, ತಮಿಳುನಾಡು ಸರ್ಕಾರವನ್ನು ನೋಡಿ. ಹೊಸದನ್ನು ಮಾಡುವುದನ್ನು ಬಿಡಿ. ಅದರಂತೆ ಮಾಡಿ. ಬಡವರ ಶಾಪ ತಟ್ಟದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಕೆಲಸ ಮಾಡಲಿ’ ಎಂದು ಆಟೊ ಚಾಲಕ ಉಮೇ್‌ ಪಿ. ಮನದ ಇಂಗಿತ ವ್ಯಕ್ತಪಡಿಸಿದರು.

ನಿತ್ಯದ ಜೀವನ ನಿಂತು ಹೋಗಿದೆ

ಬೆಳಗಾಗುವ ಮುನ್ನವೇ ಆಟೊ ಹತ್ತಿ ಮಧ್ಯಾಹ್ನದ ಊಟದವರೆಗೆ, ನಂತರ ರಾತ್ರಿಯವರೆಗೂ ಓಡಿಸಿ ಬದುಕುತ್ತಿದ್ದೇವು. ಈಗ ದುಡಿಯುವ ಹಾಗಿಲ್ಲ. ಬದುಕು ಕತ್ತಲೆಯಾಗಿದೆ. ಮಲಗಿದರೂ ನಿದ್ದೆ ಹತ್ತುತ್ತಿಲ್ಲ. ಸರ್ಕಾರ ಲಾಕ್‌ಡೌನ್‌ ಮುಗಿಯುವವರೆಗೆ ಸಹಾಯಧನ ನೀಡಿ ನಮ್ಮಂಥವರನ್ನು ಜೀವಂತವಾಗಿಡಲಿ ಎಂದು ಕೇಳುತ್ತೇವೆ. ಕಾಲಿಗೆ ನೋವು ಆದರೆ ಔಷಧಿ ಹಚ್ಚಬೇಕು ಕಾಲು ಕಡಿದರೆ ಹೇಗೆ? ಲಾಕ್‌ಡೌನ್‌ ಮಾಡಲಿ ಬೇಡ ಅನ್ನುವುದಿಲ್ಲ. ಸರ್ಕಾರ ಕ್ರಮ ಸೂಕ್ತ ಆದರೆ, ಬಡವರು ಬದುಕು ಹೇಗೆ ಎಂದು ಸ್ವಲ್ಪ ಯೋಚಿಸಬೇಕು ಎಂದು ಆಟೊ ಚಾಲಕ ಮಣಿರಾಜ್.

ಸರ್ಕಾರ ತುರ್ತಾಗಿ ಸಹಾಯಧನ ನೀಡಲಿ

‘ಸಾಲ ಮಾಡಿ ಕಾರು ಖರೀದಿಸಿ ತಕ್ಕ ಮಟ್ಟಿಗೆ ಬದುಕು ಸಾಗಿಸುತ್ತಿದ್ದೆವು. ಈಗ ಮನೆಯಲ್ಲೇ ಕುಳಿತುಕೊಳ್ಳವಂತಾಗಿದೆ. ದುಡಿಮೆ ಇಲ್ಲ, ಲೋನ್‌ ಕಂತು ಕಟ್ಟಲೇಬೇಕು. ಕಳೆದ ಬಾರಿ ಲಾಕ್‌ಡೌನ್‌ ಪರಿಹಾರ ಕೊಡುತ್ತೇವೆಂದು ಹೇಳಿದಾಗ ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದೆವು. ಹಣ ಬರಲಿಲ್ಲ. ಮತ್ತೆ ಉದ್ಯೋಗ ಶುರು ಆಯಿತು, ದುಡಿದು ಜೀವನ ನಡೆಸಿದೆವು. ಈಗಲಾದರೂ ಸರ್ಕಾರ ತುರ್ತು ಹಣವನ್ನು ನಮ್ಮ ಬ್ಯಾಂಕ್ ಅಕೌಂಟ್‌ಗೆ ಹಾಕುವ ವ್ಯವಸ್ಥೆ ಮಾಡಬೇಕು’ ಎಂದು ಕಾರು ಚಾಲಕ ಹರ್ಷರಾಜ್‌ ಯಾದವ ಎಂ.ಎಸ್‌. ಮನವಿ ಮಾಡಿದರು.

ಶೂನ್ಯ ಬಡ್ಡಿದರದಲ್ಲಿ ಸರ್ಕಾರ ಸಾಲ ನೀಡಲಿ

ಸರ್ಕಾರದ ಕ್ರಮಕ್ಕೆ ಬದ್ಧರಾಗಿ ಕಾರುಗಳನ್ನು ಅತ್ಯಾವಶ್ಯಕ ಸೇವೆಗೆ ಮಾತ್ರ ಹೊರ ಬಿಡುತ್ತಿದ್ದೇವೆ. ದುಡಿಮೆ ಇಲ್ಲದೆ ಟ್ರಾವೆಲ್‌ನವರು, ಕಾರು ಚಾಲಕ– ಮಾಲೀಕರು ಕಷ್ಟದಲ್ಲಿದ್ದಾರೆ. ಸರ್ಕಾರ ತೆರಿಗೆ ಹಾಗೂ ಇನ್ಸುರೆನ್ಸ್ ಮನ್ನಾ ಮಾಡಲಿ ಅಥವಾ ಕಾಲಾವಕಾಶ ನೀಡಲಿ. ಕಷ್ಟದ ದಿನಗಳಲ್ಲಿ ಕಾರು ಚಾಲಕರು ಬದುಕಲು ಅನುಕೂಲವಾಗುವಂತೆ ಶೂನ್ಯ ಬಡ್ಡಿದಲ್ಲಿ ಸಾಲ ನೀಡಬೇಕು. ಭರ್ತಿಗೆ ಒಂದು ವರ್ಷ ಟೈಮ್ ಕೊಟ್ಟರೆ ಸಾಕು. ಹಣ ಕಟ್ಟುತ್ತೇವೆ’ ಎಂದು ಮೈಸೂರು ಟ್ರಾವೆಲರ್ಸ್‌ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಟ್ರಾವೆಲ್‌ ಪಾರ್ಕ್‌ ಮಾಲೀಕ ಜಯಕುಮಾರ್ ಹೇಳಿದರು.

ಮರಳಿ ಊರಿಗೆ ಹೋಗಲು ಆಗುತ್ತಿಲ್ಲ

‘ಮೈಸೂರಲ್ಲಿ ಪ್ರವಾಸಿಗರು ಹೆಚ್ಚು, ಬಾಡಿಗೆ ಚೆನ್ನಾಗಿ ಸಿಗುತ್ತದೆ ಎಂದು ದೂರದ ವಿಜಯಪುರ ಜಿಲ್ಲೆಯ ಜಿಗಜಿಣಗಿ ಗ್ರಾಮದಿಂದ ಇಲ್ಲಿ ರೂಮ್ ಮಾಡಿಕೊಂಡು ದುಡಿಯುತ್ತಿದ್ದೆವು. ವರ್ಷ ಕಳೆಯುವುದರೊಳಗೆ ಮತ್ತೆ ಲಾಕ್‌ಡೌನ್‌ ಆಗಿದೆ. ಕಾರು ಹೊರ ತೆಗೆಯಲಾಗದೆ ಆರು ದಿನ ಇದ್ದೆ. ಬುಧವಾರ ಬೆಂಗಳೂರು ಏರ್‌ಪೋರ್ಟ್‌ಗೆ ಬಾಡಿಗೆ ಸಿಕ್ಕಿತು. ₹ 2 ಸಾವಿರ ಬಾಡಿಗೆಯಲ್ಲಿ 1,500 ಡೀಸೆಲ್‌ಗೆ ಹೋಯಿತು. ಮೈಸೂರಿಗೆ ಬಾಡಿಗೆ ಸಿಕ್ಕರೆ ಒಳ್ಳೆಯದು ಎಂದು ರಾತ್ರಿಯಿಡೀ ನಿಂತೆ. ಯಾವುದೇ ಬಾಡಿಗೆ ಸಿಗಲಿಲ್ಲ. ಬಿಸ್ಕೆಟ್‌, ಬ್ರೆಡ್‌ ತಿಂದು ಬದುಕಬೇಕಾದ ಅನಿವಾರ್ಯತೆ. ಊರಿಗೆ ಹೋಗೋಣವೆಂದರೆ ಗಾಡಿ ಬಿಡುತ್ತಿಲ್ಲ. ಬದುಕುವುದು ಹೇಗೆ ಎಂಬ ಚಿಂತೆ ಆಗಿದೆ’ ಎಂದು ಕಾರು ಚಾಲಕ ವಿಜಯ್‌ ಕೋತಗೌಡರ ಸಂಕಟ ಹೇಳಿಕೊಂಡರು.

ಸ್ವಂತ ನೆಲೆಯೂ ಇಲ್ಲ: ಈಗ ಬದುಕಿನ ಚಿಂತೆ

‌ಮೈಸೂರಲ್ಲೇ ಹುಟ್ಟಿ ಬೆಳೆದರೂ ಸ್ವಂತ ನೆಲೆಯೊಂದನ್ನು ಕಟ್ಟಿಕೊಳ್ಳಲಾಗಲಿಲ್ಲ ಎಂಬ ಚಿಂತೆಯಿತ್ತು. ಈಗ ಬದುಕುವುದು ಹೇಗೆ? ಎಂಬ ಚಿಂತೆ ಶುರುವಾಗಿದೆ. ಕೊರೊನಾ ಬಡವರನ್ನು ದುಡಿದು ಬದುಕಲು ಕೂಡ ಬಿಡುತ್ತಿಲ್ಲ. ಸರ್ಕಾರ ರೇಶನ್‌ ಹಾಗೂ ಎಷ್ಟಾದರೂ ದುಡ್ಡು ಕೊಟ್ಟು ಬದುಕಿಸಲಿ.

–ಶಿವಸ್ವಾಮಿ, ಆಟೊ ಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT