ಚಾಮರಾಜನಗರ: 'ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ನಡೆದಿರುವ ಬೆಳವಣಿಗೆ ದುರದೃಷ್ಟಕರ. ಪಕ್ಷದ ನಾಯಕರೊಬ್ಬರಿಗೆ ಹಿನ್ನಡೆ ಮಾಡಬೇಕು ಎಂಬ ಕಾರಣಕ್ಕೆ ನಮ್ಮ ಪಕ್ಷದ ಮುಖಂಡರೇ ಸೇರಿ ಮಾಡಿರುವ ಕೆಲಸ ಇದು' ಎಂದು ವರುಣಾ ಕ್ಷೇತ್ರದ ಶಾಸಕ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮಗ ಡಾ.ಯತೀಂದ್ರ ಅವರು ಹೇಳಿದರು.
ನಗರದಲ್ಲಿ ನಡೆದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, 'ಇಂತಹದ್ದು ನಡೆಯ ಬಾರದು. ಪಕ್ಷದಲ್ಲಿ ಒಡಕಿದೆ ಎಂಬ ಸಂದೇಶವನ್ನು ಇಂತಹ ಬೆಳವಣಿಗೆಗಳು ರವಾನಿಸುತ್ತವೆ' ಎಂದರು.
'ಇಂತಹ ಘಟನೆಗಳು ರಾಜ್ಯದಲ್ಲಿ ಎಲ್ಲೂ ಮರುಕಳಿಸಬಾರದು. ಎಲ್ಲ ಮುಖಂಡರು ಒಗ್ಗಟ್ಟಾಗಿರುವಂತೆ ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ನೋಡಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ' ಎಂದರು.