ಮೈಸೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಎಲೆಮರೆ ಕಾಯಿಗಳಂತಿದ್ದ, ‘ಪ್ರಜಾವಾಣಿ’ ಗುರುತಿಸಿದ ಯುವ ಸಾಧಕರ ಬೆನ್ನು ತಟ್ಟಿದ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ಕುಮಾರ್, ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡುವಂತೆ ಪ್ರೋತ್ಸಾಹದ ಮಾತುಗಳನ್ನು ಹೇಳಿದರು.
ಮಾನಸ ಗಂಗೋತ್ರಿ ಆವರಣದ ಸೆನೆಟ್ ಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ 16 ಯುವ ಸಾಧಕರಿಗೆ ಪ್ರಮಾಣ ಪತ್ರ ವಿತರಿಸಿದ ಕುಲಪತಿ, ಪ್ರತಿಯೊಬ್ಬರ ಸಾಧನೆಗೂ ಮೆಚ್ಚುಗೆ ವ್ಯಕ್ತಪಡಿಸಿದರು.
ಯುವ ಸಾಧಕರ ಆಯ್ಕೆ ಸಮಿತಿಯ ತೀರ್ಪುಗಾರರಲ್ಲೊಬ್ಬರಾಗಿದ್ದ ಪ್ರೊ.ಎನ್.ಉಷಾರಾಣಿ, ಕೆಲವು ಸಾಧಕರ ಸಾಧನೆಯನ್ನು ವೇದಿಕೆಯಲ್ಲೇ ಸಂಕ್ಷಿಪ್ತವಾಗಿ ಕುಲಪತಿಗೆ ವಿವರಿಸಿದರು. ವೈಯಕ್ತಿಕವಾಗಿ ಪರಿಚಯಿಸಿದರು. ಇದರಿಂದ ಮತ್ತಷ್ಟು ಕುಲಪತಿ ಮತ್ತಷ್ಟು ಸ್ಫೂರ್ತಿಗೊಂಡರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ ಸಾಥ್ ನೀಡಿದರು.
ಸ್ನೇಹಿತರ ಸಾಥ್: ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ ‘ಪ್ರಜಾವಾಣಿ’ 20 ಯುವ ಸಾಧಕರನ್ನು ಗುರುತಿಸಿತ್ತು. ಇವರ ಬಗ್ಗೆ ಎರಡು ಪುಟ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಸೋಮವಾರ ಅಭಿನಂದನಾ ಪ್ರಮಾಣ ಪತ್ರ ವಿತರಿಸಲಾಯಿತು.
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಸಂಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ, ಪ್ರೊ.ಎನ್.ಉಷಾರಾಣಿ ನೇತೃತ್ವದ ಆಯ್ಕೆ ಸಮಿತಿ 20 ಯುವ ಸಾಧಕರನ್ನು ಆಯ್ಕೆ ಮಾಡಿತ್ತು.
ಯುವ ಸಾಧಕರಿಗೆ ಅಭಿನಂದನೆ ಸಲ್ಲಿಸುವುದನ್ನು ಕಣ್ತುಂಬಿಕೊಳ್ಳಲು ಗೆಳೆಯರು, ಒಡನಾಡಿಗಳು, ಕುಟುಂಬ ವರ್ಗದವರು ಸಹ ನಿಗದಿತ ಸಮಯಕ್ಕೆ ಬಂದಿದ್ದರು. ವೇದಿಕೆಯಲ್ಲಿ ಅಭಿನಂದಿಸುವುದನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿಯುವ ಜತೆಯಲ್ಲೇ, ಕ್ಷಣಾರ್ಧದಲ್ಲೇ ಸಭಾಂಗಣದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ತಮ್ಮ ಸಂಭ್ರಮವನ್ನು ಹಂಚಿಕೊಂಡರು.