ಪಿರಿಯಾಪಟ್ಟಣ: ತಾಲ್ಲೂಕಿನಲ್ಲಿ ಕೊರೊನಾ ರೂಪಾಂತರ ವೈರಸ್ ಹರಡುವಿಕೆಯನ್ನು ಸಂಪೂರ್ಣ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ತಿಳಿಸಿದರು.
ತಾಲ್ಲೂಕಿನ ಬೈಲಕುಪ್ಪೆ ಟಿಬೆಟ್ ಕ್ಯಾಂಪ್ಗೆ ಅಧಿಕಾರಿಗಳೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದರು.
‘ತಾಲ್ಲೂಕಿನಲ್ಲಿ ಕಂಡು ಬಂದಿರುವ 29 ಕೋವಿಡ್ ಪ್ರಕರಣಗಳಲ್ಲಿ ಬೈಲಕುಪ್ಪೆ ಟಿಬೆಟನ್ ಲಾಮಾ ಕ್ಯಾಂಪ್ನಲ್ಲೇ 23 ಪ್ರಕರಣ ಪತ್ತೆಯಾಗಿವೆ. ಟಿಬೆಟನ್ ಸೆಟಲ್ಮೆಂಟ್ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
‘ತಾಲ್ಲೂಕಿಗೆ ಹೊರ ರಾಜ್ಯಗಳಿಂದ ಆಗಮಿಸುವವರು ಹಾಗೂ ಶಬರಿಮಲೆ ಯಾತ್ರಾರ್ಥಿಗಳಿಗೆ ಆರ್ಟಿ–ಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. 10 ದಿನ ನಿಗಾ ವಹಿಸಲಾಗುವುದು. ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ’ ಎಂದು ಹೇಳಿದರು.
ತಾಲ್ಲೂಕು ಆರೋಗ್ಯ ಹಿರಿಯ ನಿರೀಕ್ಷಣಾಧಿಕಾರಿ ಕೆ.ಆರ್.ಪ್ರಕಾಶ್, ಸಿಬ್ಬಂದಿ ಕಿರಣ್ ಕುಮಾರ್, ಬೈಲಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀವಳ್ಳಿ, ಸಿಬ್ಬಂದಿ ಮುಜೀಬ್ ಇದ್ದರು.