ಮೈಸೂರು: ಎರಡನೇ ಸುತ್ತಿನ ಲಾಕ್ಡೌನ್ ಶುರುವಾಗಿದೆ. ಆದರೂ, ಕೋವಿಡ್ನ ಎರಡನೇ ಅಲೆ ಮಾತ್ರ ನಿಯಂತ್ರಣಕ್ಕೆ ಬಾರದಾಗಿದೆ.
ದಿನದಿಂದ ದಿನಕ್ಕೆ ವೈರಸ್ ಶರವೇಗದಲ್ಲಿ ಸಮುದಾಯಕ್ಕೆ ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಅಹೋರಾತ್ರಿ ಶ್ರಮಿಸಿದರೂ ಫಲ ಸಿಗದಾಗಿದೆ. ಈ ಸಾಂಕ್ರಾಮಿಕ ಪಿಡುಗನ್ನು ನಿಯಂತ್ರಿಸುವ ಕೀಲಿ ಕೈ ಇದೀಗ ಜನರ ಬಳಿಯೇ ಉಳಿದಿದೆ.
ಸಾಮಾನ್ಯ ಜನರ ಪ್ರಜ್ಞಾಪೂರ್ವಕ ನಡೆಯಿಂದ ಮಾತ್ರ ಕೋವಿಡ್–19 ವಿರುದ್ಧ ಗೆಲ್ಲಬಹುದಾಗಿದೆ. ಮೊದಲ ಅಲೆ ಹೊಸತಾದರೂ ಇಷ್ಟೊಂದು ಭಯ ಹುಟ್ಟಿಸಿರಲಿಲ್ಲ. ಎರಡನೇ ಅಲೆಯಲ್ಲಿ ಮಧ್ಯ ವಯಸ್ಕರು, ಯುವ ಸಮೂಹ ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ನಿತ್ಯವೂ ನನ್ನ ಕಣ್ಣುಗಳಿಂದಲೇ ನೋಡುತ್ತಿರುವುದಕ್ಕೆ ಈ ಮಾತುಗಳನ್ನು ಹೇಳುತ್ತಿರುವೆ. ಮೃತರ ಕುಟುಂಬದವರ ಆಕ್ರಂದನ ಕೇಳಲಾಗುತ್ತಿಲ್ಲ.
ದಿನಕ್ಕೊಂದು ಹೊಸ ಆಸ್ಪತ್ರೆ ಉದ್ಘಾಟನೆಯಾದರೂ ಚಿಕಿತ್ಸೆಗಾಗಿ ಹಾಸಿಗೆ ಸಿಗುತ್ತಿಲ್ಲ. ವೈದ್ಯಕೀಯ ಸಿಬ್ಬಂದಿ ಕೊರತೆ ಸಾಕಷ್ಟಿದೆ. ಬಸವಳಿದಿದ್ದಾರೆ. ಇದೀಗ ಯಾರೊಬ್ಬರ ಕೈನಲ್ಲೂ ಪರಿಸ್ಥಿತಿಯಿಲ್ಲ. ಮಿತಿ ಮೀರಿದೆ. ಪ್ರತಿಯೊಬ್ಬರೂ ಎಚ್ಚರಿಕೆಯಿಂದಿರಲೇಬೇಕಿದೆ.
ಲಾಕ್ಡೌನ್ ಇರುವುದರಿಂದ ಅನಗತ್ಯವಾಗಿ ಮನೆಯಿಂದ ಹೊರ ಬರಲೇಬೇಡಿ. ಮೂರನೇ ಅಲೆಯ ಅಪಾಯವೂ ಈಗಾಗಲೇ ಕರೆ ಗಂಟೆಯಾಗಿ ಎಚ್ಚರಿಸುತ್ತಿದೆ. ತಾಲ್ಲೂಕು ಕೇಂದ್ರಗಳಲ್ಲೂ ಹಾಸಿಗೆ ಸಿಗದಾಗಿವೆ. ಇನ್ನಾದರೂ ನಿಮ್ಮ ಜೀವದ ಎಚ್ಚರಿಕೆ ನಿಮ್ಮದೇ ಆಗಿರಲಿ. ಕೋವಿಡ್–19ನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ.
ಲಾಕ್ಡೌನ್ ಇದ್ದರೂ ಅಗತ್ಯ ಸೇವೆಗಳಿಗೆ ಅಡ್ಡಿಯಿಲ್ಲ. ಆದ್ದರಿಂದ ಒಂದೇ ಬಾರಿಗೆ ಬೀದಿಗಿಳಿಯಬೇಡಿ. ನಿಧಾನವಾಗಿಯೇ ಅಂಗಡಿಗಳಿಗೆ ತೆರಳಿ, ಬೇಕಾದ ವಸ್ತು ಖರೀದಿಸಿಕೊಂಡು ಮನೆಗೆ ಬನ್ನಿ. ಜನದಟ್ಟಣೆಗೆ ನೀವೇ ಕಾರಣರಾಗಬೇಡಿ. ಬೇಸಿಗೆಯ ಉರಿ ಬಿಸಿಲಿನಲ್ಲೂ ನಿಮಗಾಗಿ ಪಿಪಿಇ ಕಿಟ್ ಧರಿಸಿ ಅಹೋರಾತ್ರಿ ಶ್ರಮಿಸುತ್ತಿರುವ ನಮ್ಮ ಪರಿಶ್ರಮಕ್ಕೆ ಕಿಂಚಿತ್ ಗೌರವ ಕೊಡಿ ಸಾಕು.
(ಪ್ರಮೀಳಾ ಅವರು ಪಿಕೆಟಿಬಿ ಆಸ್ಪತ್ರೆಯ ಹಿರಿಯ ಶುಶ್ರೂಷಕ ಅಧಿಕಾರಿ)
ನಿರೂಪಣೆ: ಡಿ.ಬಿ.ನಾಗರಾಜ
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.