ಎಲ್ಲೆಡೆ ಅಚ್ಚಹಸಿರು ಗಂಗೋತ್ರಿಗೆ ಒಡವೆಯಂತೆ ಸಿಂಗಾರಗೊಂಡಿದೆ. ಇಲ್ಲಿನ ಬಣ್ಣಬಣ್ಣದ ಗುಲ್ಮೊಹರ್ ಹೂವುಗಳು. ಬಿಸಿಲ ಬೇಗೆಯಲ್ಲಿ ಈ ಹಿಂದೆ ಕಳೆಗುಂದಿದ್ದ ಗಂಗೋತ್ರಿ ತಿಂಗಳಿನಿಂದ ಅಬ್ಬರಿಸಿದ ಮಳೆರಾಯನ ಕೃಪೆಯಿಂದ ನಿಸರ್ಗದತ್ತವಾಗಿಯೇ ಹಸಿರು ಅಲಂಕಾರವನ್ನು ತಾನೇ ಮಾಡಿಕೊಂಡಂತಿದೆ. ಪುಟ್ಟಮಕ್ಕಳಿಂದ ವೃದ್ಧರ ತನಕ ಇಷ್ಟಪಡುವಂತಹ ಸೌಂದರ್ಯ ನಮ್ಮ ಗಂಗೋತ್ರಿಯದು. ಇಂತಹ ನಿಸರ್ಗ ಸೌಂದರ್ಯಕ್ಕೆ ಎಲ್ಲರೂ ಮನಸೋತು ಪ್ರಕೃತಿ ಸೌಂದರ್ಯ ಸವಿಯುತ್ತಾರೆ. ಪ್ರೀತಿ-ಪ್ರೇಮ, ಸ್ನೇಹ, ಮನರಂಜನೆ, ಶಿಕ್ಷಣಕ್ಕೆ ಪೂರಕ ವಾತಾವರಣ ಇಲ್ಲಿದೆ.
ಎತ್ತ ನೋಡಿದರೂ ಈಗ ಹಸಿರೇ ಹಸಿರು. ವಿಸ್ತಾರ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಗಂಗೋತ್ರಿಯು ಪರಿಸರ ಕುರಿತಾದ ಕಾಳಜಿಯನ್ನು ಬಿಂಬಿಸುತ್ತದೆ. ಈಗ ತಾನೇ ಎಲ್ಲಾ ಸ್ನಾತಕೋತ್ತರ ಪರೀಕ್ಷೆಗಳು ಮುಗಿದು, ವಿದ್ಯಾರ್ಥಿಗಳು ತಮ್ಮ ಊರುಗಳತ್ತ ತೆರಳಿದ್ದು, ಜುಲೈ ಹೊತ್ತಿಗೆ ತರಗತಿಗಳು ಆರಂಭವಾಗುತ್ತವೆ. ವಿದ್ಯಾರ್ಥಿಗಳಲ್ಲಿ ನವ ಉಲ್ಲಾಸ ತರುತ್ತಿದೆ. ಹಸಿರು ಗಂಗೋತ್ರಿಯ ನಡುವೆ ಬಣ್ಣಬಣ್ಣದ ಚಿಟ್ಟೆಗಳಂತೆ ವಿದ್ಯಾರ್ಥಿಗಳು ಕಂಡುಬರುತ್ತಾರೆ.
ದೈನಂದಿನ ಚಟುವಟಿಕೆಗಳು ಬೋರೆನಿಸಿದಾಗ ಗಂಗೋತ್ರಿಯನ್ನು ಒಂದು ಸುತ್ತ ಹಾಕಿದರೆ ಸಾಕು ಮನಸ್ಸಿಗೆ ಏನೋ ಮುದ. ಉಪಾಹಾರಕ್ಕಾಗಿ ಬೇರೆಲ್ಲೂ ಹೋಗಬೇಕೆಸುವುದಿಲ್ಲ. ಇಲ್ಲೆಯೇ ಇರುವ ರೌಂಡ್ ಕ್ಯಾಂಟಿನ್ನಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಪ್ರೇಮಿಗಳಿಗೂ ಮತ್ತು ಪಕ್ಕದ ಕಾಲೇಜಿನ ವಿದ್ಯಾರ್ಥಿಗಳಿಗೂ ಕೂಡ ಹರಟೆ ಹೊಡೆಯಲು ಹೇಳಿಮಾಡಿಸಿದ ಜಾಗ ಇದಾಗಿದೆ.
ಇನ್ನೂ ಮಹಾರಾಜರ ಕಾಲದ ಜಯಲಕ್ಷ್ಮಿ ವಿಲಾಸ ಅರಮನೆ ಗಂಗೋತ್ರಿಯ ಪ್ರಮುಖ ಸ್ಥಳಗಳಲ್ಲಿ ಒಂದು. ಆದರೆ, ವಿದ್ಯಾರ್ಥಿಗಳಿಗೆ ತಮ್ಮ ಸ್ನೇಹಿತರ ಹುಟುಹಬ್ಬಗಳನ್ನು ಆಚರಿಸಲು ಇರುವ ಹಾಟ್ಸ್ಪಾಟ್ ಅಂತಾನೇ ಫೇಮಸ್ ಆಗಿದೆ. ಗಂಗೋತ್ರಿಯ ಕೇಂದ್ರ ಬಿಂದು ಶತಮಾನೋತ್ಸವದ ಗಡಿಯಾರ ಗೋಪುರ. ಪ್ರವಾಸಿಗರ, ಅತಿಥಿಗಳ ನೆಚ್ಚಿನ ತಾಣ. ಇಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳದೇ ಯಾರೂ ಹಿಂತಿರುಗುವುದಿಲ್ಲ. ಆಕಾಶದಲ್ಲಿ ಮೋಡ ಕವಿದಾಗ ಒಂದು ರೀತಿ, ಬಿಸಿಲ ಸಮಯದಲ್ಲಿ ಮತ್ತೊಂದು ರೀತಿ, ಮಹಡಿಗಳ ಮೇಲೆ ನಿಂತಾಗ ಇನ್ನೊಂದು ರೀತಿ...
ಮೈಸೂರು ಪ್ರವಾಸಿಗರ ಸ್ವರ್ಗ. ಆದರೆ, ಮಾನಸಗಂಗೋತ್ರಿಯೇ ಒಂದು ಪ್ರಪಂಚ. ವಿದೇಶಿ ವಿದ್ಯಾರ್ಥಿಗಳು, ಅಂತರರಾಜ್ಯ ವಿದ್ಯಾರ್ಥಿಗಳು, ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಬಹುಬೇಗ ನಮ್ಮ ಮೈಸೂರಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಾರೆ. ಎಲ್ಲಾ ವಯೋಮಾನದವರನ್ನು ಅಪ್ಪಿಕೊಳ್ಳುವಂತಹ ಸುಂದರ ವಾತಾವರಣ ಇಲ್ಲಿದೆ. ಇಂಥ ಸುಂದರ ಪರಿಸರವನ್ನು ಕಾಪಾಡಿಕೊಳ್ಳಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.