ನಗರದಲ್ಲಿ ಮಕ್ಕಳ ದಿನದ ಸಂಭ್ರಮ

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಕ್ಕಳ ದಿನಾಚರಣೆ ಕಾರ್ಯಕ್ರಮಗಳು ಸೋಮವಾರ ಸಂಭ್ರಮದಿಂದ ನಡೆದವು.
ಶಾಲೆಗಳಲ್ಲಿ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಕ್ಕಳು ಪ್ರತಿಭೆ ಪ್ರದರ್ಶಿಸಿ ಸಂಭ್ರಮಿಸಿದರು.
ಮಕ್ಕಳೊಂದಿಗೆ ಬೆರೆತ ಶಾಸಕರು:
ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಜಯನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸೇರಿ ಮಕ್ಕಳ ದಿನ ಆಚರಿಸಿದರು.
‘ಪರೀಕ್ಷೆ ಒಂದು ಹಬ್ಬ’ ಎನ್ನುವ ಸಂವಾದ ಕಾರ್ಯಕ್ರಮ ನಡೆಸಿದರು. ‘ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಬೇಕು. ಭಯ ಸಲ್ಲದು’ ಎಂದು ಧೈರ್ಯ ತುಂಬಿದರು.
‘ಉನ್ನತ ಸ್ಥಾನದಲ್ಲಿರುವವರಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದವರ ಸಂಖ್ಯೆಯೇ ಹೆಚ್ಚಿದೆ. ಕೀಳರಿಮೆ ಇಟ್ಟುಕೊಳ್ಳಬಾರದು. ಉನ್ನತ ಶಿಕ್ಷಣಕ್ಕೆ ಬೇಕಾದ ಸಹಾಯವನ್ನು ನಾನು ಮಾಡುತ್ತೇನೆ’ ಎಂದು ತಿಳಿಸಿದರು.
‘ಚೆನ್ನಾಗಿ ಓದಿ ಒಳ್ಳೆಯ ಹೆಸರು ಮಾಡಿದರೆ ತಂದೆ–ತಾಯಿ ಹೆಮ್ಮೆ ಪಡುತ್ತಾರೆ’ ಎಂದರು.
‘ಮುಂದಿನ ದಿನಗಳಲ್ಲಿ ಮಕ್ಕಳನ್ನು ಪ್ರತಿ ಶನಿವಾರ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಕರೆದೊಯ್ದು, ಪಠ್ಯೇತರ ಜ್ಞಾನ ನೀಡುವಂತೆ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಡಿಡಿಪಿಐ ಜೊತೆ ಚರ್ಚಿಸುತ್ತೇನೆ. ಆಟದ ಮೈದಾನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇನೆ’ ಎಂದರು.
ಮಕ್ಕಳಿಗೆ ಪುಸ್ತಕ, ಲೇಖನಿ, ಸಿಹಿ ವಿತರಿಸಿದರು.
ಶಾಲೆ ಆವರಣದಲ್ಲಿ ನೂತನವಾಗಿ 2 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರೆವೇರಿಸಿದರು.
ಸಂವಾದದಲ್ಲಿ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದವರಿಗೆ ನಗದು ಬಹುಮಾನ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಮರಾಧ್ಯಾ, ಬಿಆರ್ಪಿ ಶ್ರೀಕಂಠ ಶಾಸ್ತ್ರಿ, ಶಿಕ್ಷಕರ ಸಂಘದ ಅಧ್ಯಕ್ಷ ಸೋಮೇಗೌಡ, ಸುರೇಶ, ಎಸ್ಡಿಎಂಸಿ ಅಧ್ಯಕ್ಷೆ ವಿನುತಾ, ಬಿಆರ್ಸಿ ಶ್ರೀಕಂಠ ಸ್ವಾಮಿ, ಹರ್ಷ, ಮುಖಂಡರಾದ ಗಿರೀಶ್, ಪ್ರದೀಪ್, ಅನಿಲ್, ಕೃಷ್ಣ, ವಿಜಯ್, ಕೆಂಪರಾಜು, ಉಮೇಶ್, ಸೋಮಣ್ಣ, ಮಹೇಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.