ಮೈಸೂರು: ‘ಸಿದ್ದರಾಮಯ್ಯ ಅವರು ಮೈಸೂರಿನ ತೋಟದ ಮನೆಯಲ್ಲಿ ಕುಳಿತು ಏನೇನೋ ಮಾತನಾಡುವುದು ಅಲ್ಲ. ವಿಧಾನಸೌಧಕ್ಕೆ ಬಂದು ದಾಖಲೆ ಪರಿಶೀಲನೆ ನಡೆಸಲಿ’ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದರು.
ಕೋವಿಡ್ ಸನ್ನಿವೇಶದಲ್ಲಿ ಮನುಷ್ಯತ್ವ ಇರುವ ಯಾರೂ ದುಡ್ಡು ಹೊಡೆಯುವ ಕೆಲಸಕ್ಕೆ ಕೈ ಹಾಕಲ್ಲ. ಆರಂಭದಲ್ಲಿ ಪರಿಕರಗಳ ಬೆಲೆ ಹೆಚ್ಚಿತ್ತು. ಈಗ ಸ್ಪರ್ಧೆ ಇರುವ ಕಾರಣ ದರ ಕಡಿಮೆ ಆಗಿದೆ. ರಾಜ್ಯದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ವಿರೋಧ ಪಕ್ಷದ ನಾಯಕರಿಗೂ ಮಾಹಿತಿ ಇರುತ್ತದೆ ಎಂದು ನುಡಿದರು.
‘ಕೋವಿಡ್ಗೆ ಸಂಬಂಧಿಸಿದಂತೆ ಯಾವುದೇ ದಾಖಲೆಯನ್ನು ಸಾರ್ವಜನಿಕರ ಮುಂದೆ ಇಡಲು ನಮ್ಮ ಸರ್ಕಾರ ಸಿದ್ಧವಿದೆ. ವಿರೋಧ ಪಕ್ಷದ ನಾಯಕರೂ ಕೇಳಬಹುದು’ ಎಂದರು.
ಕಳೆದ ನಾಲ್ಕೈದು ತಿಂಗಳಿನಿಂದ ಕೋವಿಡ್–19 ನಿರ್ವಹಣೆಗಾಗಿ ರಾಜ್ಯ ಸರ್ಕಾರ ಖರ್ಚು ಮಾಡಿರುವುದು ₹ 554 ಕೋಟಿ ಮಾತ್ರ. ಆದರೆ, ಸಿದ್ದರಾಮಯ್ಯ ಅವರು ₹ 2,300 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ. ಅದ್ಯಾಗೆ ಎಂದು ಪ್ರಶ್ನಿಸಿದರು.