ಮೈಸೂರು: ಇಲ್ಲಿನ ರಿಂಗ್ರಸ್ತೆಯ ಅಬ್ದುಲ್ ಕಲಾಂ ನಗರದಲ್ಲಿ 2 ಆನೆ ದಂತಗಳು ಹಾಗೂ ಜಿಂಕೆ ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸಿದ ಐವರನ್ನು ಅರಣ್ಯ ಸಂಚಾರ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರಿನ ವಿನೋದ್, ರವಿಕುಮಾರ್, ಗೌತಮ್, ನಾಗರಾಜ್, ಮತ್ತು ಅಬ್ದುಲ್ ರಾಜಿಕ್ ಬಂಧಿತರು.
ಸುಮಾರು 40 ವರ್ಷದ ಹಳೆಯದಾದ 2 ಆನೆದಂತಗಳು ಮತ್ತು ಜಿಂಕೆಕೊಂಬುಗಳನ್ನು ಇವರು ಇಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಅಧಿಕಾರಿಗಳು ಬಂಧಿಸಿದ್ದಾರೆ. ಇವರಿಂದ 2 ಸ್ಕೂಟರ್ಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಎಫ್ ಎ.ಟಿ.ಪೂವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಪೂವಯ್ಯ ಅವರ ನೇತೃತ್ವದ ತಂಡದಲ್ಲಿ ಪ್ರಭಾರ ವಲಯ ಅರಣ್ಯಾಧಿಕಾರಿ ಲಕ್ಷ್ಮೀಶ, ಉಪವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ನಾಗರಾಜ್, ಮೋಹನ್, ಸುಂದರ್, ಪ್ರಮೋದ್, ಸಿಬ್ಬಂದಿಯಾದ ಸತೀಶ್, ಚನ್ನಬಸವಯ್ಯ, ಗೋವಿಂದ, ಮಹಂತೇಶ್, ರವೀಂದ್ರನ್, ರವಿಕುಮಾರ್, ಶರಣಬಸವಪ್ಪ, ಕೊಟ್ರೇಶ್, ಮಧು ಮತ್ತು ಪುಟ್ಟಸ್ವಾಮಿ ಇದ್ದರು.