ಮೈಸೂರು: ಜಿಲ್ಲೆಯ ಎಂಟು ತಾಲ್ಲೂಕಿನ 250 ಗ್ರಾಮ ಪಂಚಾಯಿತಿಯ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ.
ಕೆ.ಆರ್.ನಗರ ತಾಲ್ಲೂಕಿನಲ್ಲಿ ಈಗಾಗಲೇ ಆಯ್ಕೆ ಪ್ರಕ್ರಿಯೆ ನಡೆದಿದೆ. ಉಳಿದ ಏಳು ತಾಲ್ಲೂಕುಗಳಲ್ಲೂ ಗ್ರಾಮ ಪಂಚಾಯಿತಿಯ ಸದಸ್ಯರಿಗೆ ಚುನಾವಣಾ ನೋಟಿಸ್ ನೀಡಲಾಗಿದ್ದು, ಫೆ.3ರ ಬುಧವಾರದಿಂದ ಚುನಾವಣೆ ನಡೆಯಲಿದೆ.
ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ನಡೆಸಲಿಕ್ಕಾಗಿ ಆಯೋಗದ ಜಿಲ್ಲಾ ಶಾಖೆ 68 ಅಧಿಕಾರಿಗಳನ್ನು ನೇಮಿಸಿದೆ. ತರಬೇತಿಯನ್ನು ನೀಡಿದೆ. ಅದರನುಸಾರ ಸಕಲ ಪ್ರಕ್ರಿಯೆ ನಡೆದಿವೆ. ಫೆ.12ರೊಳಗೆ ಜಿಲ್ಲೆಯಲ್ಲಿ ಚುನಾವಣೆ ನಡೆದ 250 ಗ್ರಾಮ ಪಂಚಾಯಿತಿಗಳಿಗೂ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ನಡೆಯಬೇಕಿದೆ. ಆಯ್ಕೆ ಘೋಷಿಸಬೇಕಿದೆ. ಜಿಲ್ಲಾ ಶಾಖೆಯಿಂದ ಫೆ.10ರೊಳಗೆ ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಆಯೋಗದ ಅಧಿಕಾರಿ ರಾಮಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
ಗ್ರಾಮ ಗದ್ದುಗೆ: ಚುನಾವಣೆ ನಡೆಸಲಿಕ್ಕಾಗಿ ಅಧಿಕಾರಿಗಳು ಸದಸ್ಯರಿಗೆ ನೋಟಿಸ್ ನೀಡುತ್ತಿದ್ದಂತೆ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ. ‘ಗ್ರಾಮ ಗದ್ದುಗೆ’ ಯಾರಿಗೆ ಸಿಗಲಿದೆ? ಎಂಬುದು ಗ್ರಾಮೀಣ ಪ್ರದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಜೆಡಿಎಸ್ ಸ್ಥಳೀಯ ಶಾಸಕರು, ವಿಧಾನಸಭಾ ಚುನಾವಣೆಯಲ್ಲಿ ಪರಾಜಿತಗೊಂಡವರ ಸಾರಥ್ಯದಲ್ಲಿ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಕಸರತ್ತಿನಲ್ಲಿ ತೊಡಗಿಸಿಕೊಂಡಿದ್ದರೆ; ಬಿಜೆಪಿ ಆಯಾ ಮಂಡಲದ ಅಧ್ಯಕ್ಷರಿಗೆ ಹೆಚ್ಚಿನ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಜವಾಬ್ದಾರಿ ನೀಡಿದೆ ಎಂಬುದು ಗೊತ್ತಾಗಿದೆ.
ಮೀಸಲಾತಿಯ ಕೈಚಳಕ ಹಾಗೂ ಸದಸ್ಯರ ಬಹುಮತ ಇರದಿದ್ದ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ–ಜೆಡಿಎಸ್ ಬೆಂಬಲಿತರ ನಡುವೆ ಮೈತ್ರಿ ಏರ್ಪಟ್ಟಿದೆ ಎಂಬ ಮಾತು ಗ್ರಾಮಾಂತರಂಗದಿಂದ ಕೇಳಿ ಬರುತ್ತಿದೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಬೆಂಬಲಿಗರನ್ನು ಗೆಲ್ಲಿಸಿಕೊಂಡಿರುವುದಾಗಿ ಹೇಳಿಕೊಳ್ಳುವ ಜಿಲ್ಲಾ ಕಾಂಗ್ರೆಸ್ ಸಹ, ಗ್ರಾಮ ಗದ್ದುಗೆಗಾಗಿ ತಂತ್ರಗಾರಿಕೆ ರೂಪಿಸಿದೆ. ಬ್ಲಾಕ್ ಹಂತದಲ್ಲಿ ಸಭೆ ನಡೆಸಿದೆ. ಪಂಚಾಯಿತಿಗೆ ಗೆದ್ದ ಸದಸ್ಯರ ಜೊತೆ ಸಮಾಲೋಚಿಸಿದೆ. ಬಹುಮತವಿರುವೆಡೆ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿಯಿರುವೆಡೆ ಅಧಿಕಾರದ ಹಂಚಿಕೆ ಸೂತ್ರ ಬಳಸಿದೆ ಎಂಬುದು ಗೊತ್ತಾಗಿದೆ.
ಅಧಿಕಾರ ಹಂಚಿಕೆಯ ಒಳ ಒಪ್ಪಂದ
ರಾಜ್ಯ ಸರ್ಕಾರ ಅಧ್ಯಕ್ಷ–ಉಪಾಧ್ಯಕ್ಷರ ಅವಧಿಯನ್ನು 30 ತಿಂಗಳಿಗೆ ನಿಗದಿಪಡಿಸಿದ್ದರೂ; ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿಯಿರುವ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಹಂಚಿಕೆ ಸೂತ್ರದ ಒಳ ಒಪ್ಪಂದ ನಡೆದಿವೆ.
ಕೆಲವೆಡೆ ಆಣೆ, ಪ್ರಮಾಣವೂ ನಡೆದಿದೆ. ತಲಾ 15 ತಿಂಗಳು, 10 ತಿಂಗಳಿನ ಅಧಿಕಾರ ಹಂಚಿಕೆ ಇಬ್ಬರು, ಮೂವರು ಆಕಾಂಕ್ಷಿಗಳ ನಡುವೆ ನಡೆದಿದೆ ಎನ್ನಲಾಗಿದೆ. ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿರುವ ಆಣೆ, ಪ್ರಮಾಣದ ವಿಡಿಯೊ ಈ ಭಾಗದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಹುಮತವಿದ್ದರೂ ಕೊನೆ ಕ್ಷಣದಲ್ಲಿ ಕೈಕೊಡಬಾರದು ಎಂದು ಸದಸ್ಯರೆಲ್ಲಾ ಒಟ್ಟಾಗಿ ಧಾರ್ಮಿಕ ಕ್ಷೇತ್ರಗಳಿಗೆ, ರೆಸಾರ್ಟ್ಗಳಿಗೆ ಪ್ರವಾಸ ತೆರಳುವುದು ಹೆಚ್ಚಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ಫೆ.5ಕ್ಕೆ ನಿಗದಿಯಾಗಿದ್ದು, ಬಹುಮತವಿರುವ ಜೆಡಿಎಸ್ ಬೆಂಬಲಿತರು ಭಾನುವಾರವೇ ಮುರುಡೇಶ್ವರ, ಗೋವಾಗೆ ತೆರಳಿದ್ದಾರೆ ಎಂಬುದು ತಿಳಿದು ಬಂದಿದೆ.
ನಂಜನಗೂಡು ತಾಲ್ಲೂಕಿನಲ್ಲಿ ಜಯ ಗಳಿಸಿರುವ ಕಾಂಗ್ರೆಸ್ ಬೆಂಬಲಿತರನ್ನು ತನ್ನೊಟ್ಟಿಗೆ ಇಟ್ಟುಕೊಳ್ಳಲಿಕ್ಕಾಗಿ, ಕಾಂಗ್ರೆಸ್ ಮುಖಂಡರೊಬ್ಬರು ಎರಡು ರೆಸಾರ್ಟ್ ಕಾದಿರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ನಾಗನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಮಲ ಅರಳಿಸಲೇಬೇಕು ಎಂಬ ಹಟದಿಂದ, ಕಾಂಗ್ರೆಸ್ ಬೆಂಬಲಿತರಾಗಿ ಆಯ್ಕೆಯಾದ ಇಬ್ಬರು ಸದಸ್ಯರನ್ನು ಬಿಜೆಪಿಗರು ತಮ್ಮೆಡೆ ಬರಸೆಳೆದು ಅಧ್ಯಕ್ಷ ಸ್ಥಾನದ ಆಮಿಷವೊಡ್ಡಿದ್ದಾರೆ ಎಂಬುದು ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.