‘ಸಾರ್ಥಕವಾದ ಪಯಣವನ್ನು ಅವರು ಮಾಡಿದ್ದಾರೆ. ಅವರ ಅಭಿಮಾನಿಗಳ ಅಭಿಲಾಷೆಯನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸಲಿದೆ. ಈಗ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಅಂಬೇಡ್ಕರ್ ಕಟ್ಟಾ ಅಭಿಮಾನಿಗಳರೆಲ್ಲರೂ ಸ್ವಾಭಿಮಾನಿಗಳೇ. ಹೇಳುವುದೊಂದು, ಮಾಡುವುದು ಇನ್ನೊಂದಾದರೆ ಸ್ವಾಭಿಮಾನಿಯಾಗಲು ಸಾಧ್ಯವಿಲ್ಲ. ಸೈದ್ಧಾಂತಿಕ ನಿಲುವಿನಲ್ಲಿ ಗಟ್ಟಿತನ ಯಾರಲ್ಲಿ ಇರುತ್ತದೆಯೋ ಅವರು ಮಾತ್ರ ಸ್ವಾಭಿಮಾನಿಯಾಗಲು ಸಾಧ್ಯ. ಅದಕ್ಕೆ ಅಂಬೇಡ್ಕರ್ ಅವರು ಸ್ವಾಭಿಮಾನಿ ಅಲ್ಲದವರು ಬದುಕಿದ್ದು ಪ್ರಯೋಜನವಿಲ್ಲ ಎಂದಿದ್ದರು. ಅದಕ್ಕೆ ತಕ್ಕಂತೆ ಪ್ರಸಾದರು ಗಟ್ಟಿ ನಿಲುವಿನೊಂದಿಗೆ ಜೀವನ ನಡೆಸಿದರು’ ಎಂದು ನೆನೆದರು.
‘ಅವರಿಗೆ ಸಾತ್ವಿಕ ಸ್ವಾಭಾವದ ಸಿಟ್ಟು ಬಹಳಷ್ಟಿತ್ತು. ಅನ್ಯಾಯವನ್ನು ಸಹಿಸಿಕೊಳ್ಳದೆ ತಕ್ಷಣ ಪ್ರತಿಕ್ರಿಯಿಸುತ್ತಿದ್ದರು. ನಮ್ಮ ಸಮಾಜದಲ್ಲಿ ಇದ್ದಂತಹ ಬದುಕಿನ ಅಸ್ತವ್ಯಸ್ತತೆ, ತಾರತಮ್ಯ, ಪ್ರತ್ಯೇಕತವಾದಗಳು, ಮಾನವ ಹಕ್ಕುಗಳ ಉಲ್ಲಂಘನೆ ಸೇರಿದಂತೆ ಮನುವಾದದ ವಿರುದ್ಧದ ಸಿಟ್ಟನ್ನು ಹೊರಹಾಕುತ್ತಿದ್ದರು. ಅದರಲ್ಲಿ ಯಾವುದೇ ಸಮುದಾಯ, ವ್ಯಕ್ತಿಯನ್ನು ನಿಂದನೆ ಮಾಡುವಂಥ ಉದ್ದೇಶ ಇರಲಿಲ್ಲ’ ಎಂದು ಹೇಳಿದರು.
‘ನಾಯಕತ್ವ ಇಲ್ಲದ ಸಮುದಾಯ ಅನಾಥವಾಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು. ಅಂತಹ ನಾಯಕತ್ವವನ್ನು ಪ್ರಸಾದರು ನಿಭಾಯಿಸಿದ್ದರು. ಅವರ ಅಗಲಿಕೆಯ ಬಳಿಕೆ ಮುಂದಿನ ನಾಯಕ ಇಂಥವರೇ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ನಿಲುವು, ಗಟ್ಟಿತನ, ಸೈದ್ಧಾಂತಿಕ ಹಾಗೂ ಜನಪರವಾದ ವಿಚಾರದ ಮೂಲಕ ಸಮುದಾಯವನ್ನು ಗಟ್ಟಿಗೊಳಿಸುವುದು ನಾಯಕತ್ವವನ್ನು ರೂಪಿಸುತ್ತದೆ’ ಎಂದು ಹೇಳಿದರು.