ಮೈಸೂರು: ಕಲಬುರಗಿಯ ಆಳಂದ ತಾಲ್ಲೂಕಿನ ಆಳಂದ್ ಫೌಂಡೇಶನ್ ನೀಡುವ ಪ್ರಸಕ್ತ ಸಾಲಿನ ಆದರ್ಶ ಪರಿಸರವಾದಿ ಪ್ರಶಸ್ತಿಗೆ ನಗರದ ಬೋಧಿ ವೃಕ್ಷ ಸೇವಾ ಸಂಸ್ಥೆ ಆಯ್ಕೆಯಾಗಿದೆ.
ಸಂಸ್ಥೆಯಿಂದ ನಡೆದ ಪರಿಸರ ಸಂರಕ್ಷಣೆ ಮತ್ತು ಅದರ ಅಗತ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಏ.24ರಂದು ಆಳಂದದ ಎ.ವಿ.ಪಾಟೀಲ್ ಪದವಿ ಕಾಲೇಜಿನಲ್ಲಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಸಂಸ್ಥೆಯು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ‘ಕಲ್ಯಾಣ ವನ’ ಯೋಜನೆಯನ್ನು ಜಾರಿಗೊಳಿಸಿದ್ದು, 25 ಎಕರೆ ಪ್ರದೇಶದಲ್ಲಿ ಗಿಡಗಳನ್ನು ನೆಡುವ ಮೂಲಕ ಅರಣ್ಯೀಕರಣಕ್ಕೆ ಮುಂದಾಗಿದೆ. ಜನರಲ್ಲೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗಿದೆ.
‘ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಸ್ಯ ಶಾಸ್ತ್ರೀಯ ವನ ಹಾಗೂ ಕೆರೆ ಅಭಿವೃದ್ಧಿಯ ಯೋಜನೆಗಳನ್ನು ಭವಿಷ್ಯದಲ್ಲಿ ಹಮ್ಮಿಕೊಳ್ಳಲು ಆಲೋಚಿಸಿದ್ದೇವೆ. ಪ್ರಸಕ್ತ ಯೋಜನೆಗೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಸಹಕಾರ ನೀಡಿದ್ದಾರೆ. ಈ ಪ್ರಶಸ್ತಿ ಮತ್ತಷ್ಟು ಉತ್ಸಾಹ ನೀಡಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಮೈಸೂರ್ ಸತೀಶ್ ಚಂದ್ರ ತಿಳಿಸಿದ್ದಾರೆ.