ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅತಿಥಿ ಗೃಹದಿಂದ ಸಾಮಗ್ರಿ ನಾಪತ್ತೆ: ರೋಹಿಣಿ ಸಿಂಧೂರಿ ವೇತನದಲ್ಲಿ ಕಡಿತಕ್ಕೆ ಮನವಿ

Published 29 ಮೇ 2024, 23:34 IST
Last Updated 30 ಮೇ 2024, 2:55 IST
ಅಕ್ಷರ ಗಾತ್ರ

ಮೈಸೂರು: ‘ಇಲ್ಲಿನ ಆಡಳಿತ ತರಬೇತಿ ಸಂಸ್ಥೆಯ (ಎಟಿಐ) ಅತಿಥಿ ಗೃಹದಲ್ಲಿ ನಾಪತ್ತೆಯಾದ ಸಾಮಗ್ರಿಗಳಿಗೆ ತಗಲುವ ಮೊತ್ತವನ್ನು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವೇತನದಲ್ಲೇ ಕಡಿತಗೊಳಿಸಬೇಕು’ ಎಂದು ಕೋರಿ ಸಂಸ್ಥೆಯ ಜಂಟಿ ನಿರ್ದೇಶಕರು (ಆಡಳಿತ) ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

‘ಹೋದ ವರ್ಷ ಮೇ 9ರಂದು ಪತ್ರ ಬರೆಯಲಾಗಿದೆ. ಇದಾಗಿ ವರ್ಷವೇ ಕಳೆದಿದ್ದರೂ ಯಾವುದೇ ಕ್ರಮವಾಗಿಲ್ಲ’ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ರೋಹಿಣಿ ಇಲ್ಲಿನ ಜಿಲ್ಲಾಧಿಕಾರಿ ಯಾಗಿ ಬಂದ ವೇಳೆ ಅಂದರೆ 2020ರ ಅ.2ರಿಂದ 2020ರ ನ.14ರವರೆಗೆ ಎಟಿಐ ಅತಿಥಿಗೃಹದಲ್ಲಿ ವಾಸವಿದ್ದರು. ಬಳಿಕ ಜಿಲ್ಲಾಧಿಕಾರಿ ನಿವಾಸಕ್ಕೆ ಸ್ಥಳಾಂತರದ ವೇಳೆ ಅತಿಥಿಗೃಹದ 2 ಟೆಲಿಫೋನ್‌ ಟೇಬಲ್‌, 2 ಬಟ್ಟೆ ಹ್ಯಾಂಗರ್, 2 ಬೆತ್ತದ ಕುರ್ಚಿ, 2 ಟೆಲಿಫೋನ್‌ ಸ್ಟೂಲ್‌, 2 ಟೀಪಾಯಿ, ಒಂದು ಮೈಕ್ರೋವೇವ್ ಒವನ್‌, ಮಂಚ, ಹಾಸಿಗೆ, 2 ಪ್ಲಾಸ್ಟಿಕ್‌ ಕುರ್ಚಿ, 2 ಯೋಗಾ ಮ್ಯಾಟ್‌, 2 ಸ್ಟೀಲ್‌ ಜಗ್‌ ಕೊಂಡೊಯ್ದಿದ್ದಾರೆ ಎಂದು ಸಂಸ್ಥೆಯು ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬರೆದಿತ್ತು. ಸಿಂಧೂರಿ ಅವರು ಇಲ್ಲಿಂದ ವರ್ಗವಾದ ಬಳಿಕ ಪತ್ರ ಬರೆಯಲಾಗಿತ್ತು.

‘ಅತಿಥಿ ಗೃಹದಲ್ಲಿನ 20 ವಸ್ತುಗಳನ್ನು ಜಿಲ್ಲಾಧಿಕಾರಿ ನಿವಾಸಕ್ಕೆ ಒಯ್ದಿದ್ದಾರೆ, ಅವುಗಳನ್ನು ಮರಳಿಸಬೇಕು’ ಎಂದು ಸಂಸ್ಥೆಯು ಜಿಲ್ಲಾಧಿಕಾರಿ ಕಚೇರಿಯನ್ನೂ ಕೋರಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಜಿಲ್ಲಾಧಿಕಾರಿ ಕಚೇರಿಯು, ‘ಜಿಲ್ಲಾಧಿಕಾರಿ ವಸತಿ ಗೃಹದಲ್ಲಿ ಎಟಿಐನ ಯಾವುದೇ ಸಾಮಗ್ರಿಗಳು ಇಲ್ಲ’ ಎಂದು ಸ್ಪಷ್ಟಪಡಿಸಿತ್ತು.

ಇದಾದ ಬಳಿಕ, ಜಿಲ್ಲಾಧಿಕಾರಿ ಉತ್ತರ ಆಧರಿಸಿ ಸಂಸ್ಥೆಯು ರೋಹಿಣಿ ಅವರಿಗೆ ಮತ್ತೊಂದು ಪತ್ರ ಬರೆದಿತ್ತು. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈ ಕಾರಣದಿಂದ ಮತ್ತೊಂದು ಪತ್ರ ಬರೆದಿರುವ ಸಂಸ್ಥೆಯ ಜಂಟಿ ನಿರ್ದೇಶಕರು, ಸಾಮಗ್ರಿಗಳ ಮೌಲ್ಯದ ಮೊತ್ತವನ್ನು ಆ ಅಧಿಕಾರಿಯ ವೇತನದಲ್ಲಿ ಕಟಾವು ಮಾಡಿ ಸಂಸ್ಥೆಗೆ ಜಮೆ ಮಾಡಬೇಕು’ ಎಂದು ಕೋರಿದ್ದಾರೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯಿ ಸಲು ಸಂಸ್ಥೆಯ ಮಹಾನಿರ್ದೇಶಕಿ ವಿ. ಮಂಜುಳಾ ನಿರಾಕರಿಸಿದರು.

‘ಎಟಿಐ ಪತ್ರವನ್ನು ನಾನು ನೋಡಿಲ್ಲ’ ಎಂದು ರೋಹಿಣಿ ಪ್ರತಿಕ್ರಿಯಿಸಿ ದರು. ಪ್ರತಿಯನ್ನು ವಾಟ್ಸ್‌ಆ್ಯಪ್‌ನಲ್ಲಿ ತರಿಸಿಕೊಂಡು ವೀಕ್ಷಿಸಿದ ಬಳಿಕವೂ ಯಾವುದೇ ಪ್ರತಿಕ್ರಿಯೆಯನ್ನೂ ಅವರು ನೀಡಲಿಲ್ಲ. ಮೊಬೈಲ್‌ ಫೋನ್‌ ಕರೆಯನ್ನೂ ಸ್ವೀಕರಿಸಲಿಲ್ಲ.

‘ಎಟಿಐ ವಸತಿಗೃಹದ ಸಾಮಗ್ರಿಗಳು ನಾಪತ್ತೆಯಾಗಿವೆ’ ಎಂದು ಸಂಸ್ಥೆ ಹೇಳುತ್ತಿದೆ. ‘ನಮ್ಮ ಬಳಿ ಇಲ್ಲ’ ಎಂದು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಪ್ರತಿಕ್ರಿಯಿಸಿದೆ. ‘ವೇತನದಲ್ಲಿ ಹಣ ಕಡಿತಕ್ಕೆ ಸಂಬಂಧಿಸಿದಂತೆ ಎಟಿಐ ಪತ್ರವೇ ತಲುಪಿಲ್ಲ’ ಎಂದು ರೋಹಿಣಿ ಹೇಳುತ್ತಿದ್ದಾರೆ. ಹಾಗಾದರೆ, ಸಾವಿರಾರು ರೂಪಾಯಿ ಮೌಲ್ಯದ ಸಾಮಗ್ರಿಗಳು ಏನಾದವು, ಒಯ್ದಿಯ್ದು ಯಾರು ಎಂಬ ಪ್ರಶ್ನೆಗಳು ಎದುರಾಗಿವೆ. ಹಲವು ಅನುಮಾನಗಳಿಗೂ ಇದು ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT