ಸುಮಾರು ದಿನಗಳಿಂದ ಮೇಲುಕೋಟೆ, ಹೊಸಹಳ್ಳಿ, ಉಳಿಗೆರೆ, ಕಾಡೇನಹಳ್ಳಿ, ನಾಣಾಪುರ, ಬಳ್ಳಿಘಟ್ಟ, ಮದೇನಹಳ್ಳಿ ಮುಂತಾದ ಗ್ರಾಮಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಜನ ಓಡಾಡಲು ಹಾಗೂ ಜಮೀನು, ತೋಟಗಳಲ್ಲಿ ಕೃಷಿ ಚಟುವಟಿಕೆ ನಡೆಸಲು ಭಯಪಡುವಂತಾಗಿದೆ.
ಉಳಿಗೆರೆ ಗ್ರಾಮದಲ್ಲಿ ಎಂದಿನಂತೆ ಬೆಳಿಗ್ಗೆ ಜಮೀನಿಗೆ ಕೂಲಿ ಕೆಲಸಕ್ಕೆ ಹಾಗೂ ಕುರಿ ಹಾಗೂ ದನ–ಕರುಗಳು ಮೇಯಿಸಲು ಹೊರಟಿದ್ದ ಮಹಿಳೆಯರು ಚಿರತೆ ನೋಡಿ ಚೀರಾಡಿ ಊರಿನತ್ತ ಓಡಿ ಬಂದಿದ್ದಾರೆ. ಕೊನೆಗೆ ಗ್ರಾಮದ ಒಳಗೂ ಚಿರತೆ ಬಂದಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ.
ಮುಖಂಡ ಚಂದ್ರು ಮಾತನಾಡಿ, ‘ಗ್ರಾಮದಲ್ಲಿ ಕಳೆದ ಎರಡು ತಿಂಗಳಲ್ಲಿ ಚಿರತೆ ದಾಳಿ ಹೆಚ್ಚಾಗಿದೆ. ಗ್ರಾಮದ ಪಾಪಣ್ಣ ಅವರ ಎರಡು ಹಸುಗಳ ಮೇಲೆ ದಾಳಿ ಮಾಡಿ ಒಂದು ಹಸು ಕೊಮಡು ಹಾಕಿದ್ದು, ಮತ್ತೊಂದನ್ನು ಎಳೆದುಕೊಂಡು ಹೋಗಿದೆ. ಗ್ರಾಮದಲ್ಲಿ ನಾಯಿಗಳು, ಮೇಕೆ, ಕುರಿಗಳನ್ನು ಎಳೆದುಕೊಂಡು ಹೋಗಿ ಕೊಂದು ಹಾಕಿದ್ದನ್ನು ಕಂಡಿದ್ದ ಗ್ರಾಮಸ್ಥರು ಮೊದಲೇ ಭಯಗೊಂಡಿದ್ದಾರೆ. ಈ ಬಗ್ಗೆ ಅರಣ್ಯಾಧಿಕಾರಿಗೆ ಎಷ್ಟೇ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.