ಹುಣಸೂರು: ‘ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಬೇಕು’ ಎಂದು ಆಹಾರ ಶಿರಸ್ತೇದಾರ್ ರಾಮಚಂದ್ರಪ್ಪ ಸೂಚಿಸಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 79,707 ಕಾರ್ಡ್ದಾರರಿದ್ದು, ಈ ಪೈಕಿ 6,014 ಕಾರ್ಡ್ದಾರರು ಆಧಾರ್ ಸಂಖ್ಯೆ ಜೋಡಿಸದೆ ನಿಷ್ಕ್ರಿಯಗೊಂಡಿದೆ. ಈ ಕಾರ್ಡ್ದಾರರಿಗೆ ಸರ್ಕಾರದಿಂದ ಪಾವತಿಸುವ ನಗದು ಪಾವತಿಸಲು ಸಾಧ್ಯವಾಗುವುದಿಲ್ಲ. ಬ್ಯಾಂಕ್ ಖಾತೆ ಹೊಂದಿಲ್ಲದೆ ಕಾರ್ಡ್ದಾರರು ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆದು ಲಿಂಕ್ ಮಾಡಿಸಬೇಕು. ಉಳಿದಂತೆ ಬ್ಯಾಂಕ್ ಖಾತೆ ಹೊಂದಿರುವ ಕಾರ್ಡ್ದಾರರು ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್ಗಳಲ್ಲಿ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಿಸಬೇಕು.
‘ತಾಲ್ಲೂಕಿನಲ್ಲಿ 8,592 ಅಂತ್ಯೋದಯದ ಕುಟುಂಬಗಳಿದ್ದು, 70,933 ಬಿಪಿಎಲ್ ಮತ್ತು 2,258 ಎಪಿಎಲ್ ಕುಟುಂಬಗಳಿವೆ. ಜುಲೈ ತಿಂಗಳಲ್ಲಿ ರಾಜ್ಯ ಸರ್ಕಾರ ನೇರ ನಗದು ಬ್ಯಾಂಕ್ ಖಾತೆಗೆ ವರ್ಗಾಯಿಸಲು ಚಾಲನೆ ನೀಡಿದ್ದು, ತಾಲ್ಲೂಕಿನ 73,693 ಕಾರ್ಡ್ದಾರರಿಗೆ ನಗದು ವರ್ಗಾವಣೆಯಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡಿತರ ಫಲಾನುಭವಿಗಳು ₹ 200 ಮತ್ತು ಆಧಾರ್ ಕಾರ್ಡ್ ಜೊತೆಗೆ ಅಂಚೆಕಚೇರಿಗೆ ತೆರಳಿದಲ್ಲಿ ಉಳಿತಾಯ ಖಾತೆ ತೆರೆದು ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿ ಕೊಡುವ ವ್ಯವಸ್ಥೆ ತಾಲ್ಲೂಕು ಆಹಾರ ಇಲಾಖೆ ಕ್ರಮವಹಿಸಿದ್ದು, ಸಾರ್ವಜನಿಕರು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಸೇವೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.