ಮೈಸೂರು: ‘ಬಿಜೆಪಿಯ ಮೈನಸ್ ಪಾಯಿಂಟ್ಗಳ ಮೇಲೆ ನಾವು ಯಾವತ್ತೂ ಚುನಾವಣೆ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಮುಖಂಡರ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಾವು ನಮ್ಮ ಕೆಲಸದ ಮೇಲೆ ಚುನಾವಣೆ ಮಾಡುತ್ತೇವೆ’ ಎಂದರು.
‘ಮೈಸೂರಿನಲ್ಲಿ ಈ ಬಾರಿ ಟಿಕೆಟ್ ಸಿಗುತ್ತದೆ ಎಂದು ಬಿಜೆಪಿಯ ಪ್ರತಾಪ ಸಿಂಹ ವಿಶ್ವಾಸ ಇಟ್ಟುಕೊಂಡಿದ್ದ. ಅವನಿಗೆ ತಪ್ಪಿಸಿ ರಾಜಮನೆತನದ ಯದುವೀರ್ಗೆ ಕೊಟ್ಟಿದ್ದಾರೆ. ಅದರ ಪ್ಲಸ್ ಅಥವಾ ಮೈನಸ್ ಲೆಕ್ಕ ಹಾಕಿ ನಾವು ಚುನಾವಣೆ ಮಾಡುವುದಿಲ್ಲ. ಅದು ಅವರ ಪಕ್ಷದ ನಿರ್ಧಾರವಷ್ಟೆ’ ಎಂದು ಪ್ರತಿಕ್ರಿಯಿಸಿದರು.
‘ಮೈಸೂರು–ಕೊಡಗು ಹಾಗೂ ಚಾಮರಾಜನಗರ ಎರಡು ಕ್ಷೇತ್ರದಲ್ಲೂ ನಾವು ಗೆಲ್ಲುವ ವಾತಾವರಣ ಇದೆ. ನಾವು ಕಳೆದ ಅವಧಿಯಲ್ಲಿ ಮತ್ತು ಈಗ ಮಾಡುತ್ತಿರುವ ಕೆಲಸ ಕೈ ಹಿಡಿಯುತ್ತದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಎಂದು ಮುಖಂಡರೆಲ್ಲರಿಗೂ ಹೇಳಿದ್ದೇನೆ. ಎರಡೂ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಹೀಗಾಗಿ ಖುಷಿಯಲ್ಲಿದ್ದೇನೆ’ ಎಂದರು.