ಮೈಸೂರು: ಮೈಸೂರು, ಚಾಮರಾಜ ನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳನ್ನು ಒಳಗೊಂಡಿರುವ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಹಲವು ಹಿನ್ನೆಲೆಯ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಒಟ್ಟು 11 ಮಂದಿ ಕಣ ದಲ್ಲಿದ್ದು, ಕಾಂಗ್ರೆಸ್ನ ಮರಿತಿಬ್ಬೇಗೌಡ – ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಜೆಡಿಎಸ್ನ ಕೆ. ವಿವೇಕಾನಂದ ನಡುವೆ ನೇರ ಹಣಾಹಣಿ ಕಂಡು ಬಂದಿದೆ. ಅಭ್ಯರ್ಥಿಗಳು ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ವೈಯಕ್ತಿಕ ವಿವರವನ್ನು ನೀಡಿದ್ದು, ಹಲವರಿಗೆ ರಾಜಕೀಯ ಹಿನ್ನೆಲೆ ಇಲ್ಲ.
ಕಣದಲ್ಲಿರುವವರಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹಾಸನ ಜಿಲ್ಲೆ ಯವರು ಒಬ್ಬರೂ ಇಲ್ಲ. ಪುಟ್ಟಸಿದ್ದಶೆಟ್ಟಿ ಅತ್ಯಂತ ಹಿರಿಯ (78) ಹಾಗೂ ಎನ್.ಅಂಬರೀಷ್ (38) ಅತ್ಯಂತ ಕಿರಿಯ ಅಭ್ಯರ್ಥಿ ಎನಿಸಿದ್ದಾರೆ. ಮಾಜಿ ಶಾಸಕರು, ಕೂಲಿ ಮಾಡುವವರು ಹಾಗೂ ಸಮಾಜ ಸೇವಕರು ಚುನಾವಣಾ ಕಣದಲ್ಲಿದ್ದಾರೆ. ಕನಿಷ್ಠ ಎಸ್ಎಸ್ಎಲ್ಸಿ ಹಾಗೂ ಪಿಎಚ್ಡಿ ಪದವೀಧರರು ಸ್ಪರ್ಧೆ ಒಡ್ಡಿದ್ದಾರೆ.
ಪಕ್ಷೇತರರಾಗಿ ಸ್ಪರ್ಧಿಸಿರುವ ಮೈಸೂರಿನ ನಿವಾಸಿ 45 ವರ್ಷದ ಅನಿಲ್ ಕುಮಾರ್ ಮಹಾರಾಜ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ ಆಗಿದ್ದಾರೆ. ಅಪರಾಧಶಾಸ್ತ್ರ ಮತ್ತು ವಿಧಿ ವಿಜ್ಞಾನ ವಿಷಯದಲ್ಲಿ ಎಂಎ., ಎಂಫಿಲ್ ಹಾಗೂ ಪಿಎಚ್ಡಿ ಪಡೆದಿದ್ದಾರೆ. ಅತಿಥಿ ಉಪನ್ಯಾಸಕ್ಕೆ ಸಿಗುವ ವೇತನವೇ ತಮ್ಮ ಆದಾಯದ ಮೂಲ ಎಂದು ಘೋಷಿಸಿಕೊಂಡಿ ದ್ದಾರೆ.
ಪಕ್ಷೇತರ ಅಭ್ಯರ್ಥಿ ಕೆ.ಆರ್.ನಗರದ ಕೆ.ಸಿ.ಪುಟ್ಟಸಿದ್ದಶೆಟ್ಟಿ 78 ವರ್ಷ ವಯಸ್ಸಿನವರು. ವಿಧಾನಪರಿಷತ್ ಮಾಜಿ ಸದಸ್ಯರೂ ಆಗಿರುವ ಅವರು ಕೃಷಿ ತಮ್ಮ ಆದಾಯದ ಮೂಲ ಎಂದು ತಿಳಿಸಿದ್ದಾರೆ. ಅವರು ಎಂಎ–ಬಿಇಡಿ ಪದವೀಧರರು.
ಚಾಮರಾಜನಗರದವರು ಹೆಚ್ಚು: ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಯಾಗಿ ಸ್ಪರ್ಧಿಸಿರುವ 47 ವರ್ಷ ವಯಸ್ಸಿನ ಎಂ.ನಾಗೇಂದ್ರ ಬಾಬು ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಮದ್ದೂರಿನವರು. ಕೃಷಿ ಮಾಡುತ್ತಿದ್ದು, ಅದು ಆದಾಯ ಮೂಲ ಎಂದು ತಿಳಿಸಿದ್ದಾರೆ. ಅವರು ಬಿಎಸ್ಸಿ ಪದವೀಧರ.
ಪಕ್ಷೇತರ ಅಭ್ಯರ್ಥಿ ಆರ್.ಮಹೇಶ್ ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಹೋಬಳಿಯ ಬಂಡಿಗೆರೆ ಗ್ರಾಮದವರು. 48 ವರ್ಷ ವಯಸ್ಸಿನ ಅವರು ಎಂಎ, ಬಿಇಡಿ, ಎಂಇಡಿ ಹಾಗೂ ಪಿಎಚ್ಡಿ ಪದವೀಧರರಾಗಿದ್ದಾರೆ. ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕ ಆಗಿದ್ದಾರೆ. ಅಲ್ಲಿ ಸಿಗುವ ವೇತನವೇ ತಮ್ಮ ಆದಾಯದ ಮೂಲ ಎಂದು ತಿಳಿಸಿದ್ದಾರೆ.
ಪಕ್ಷೇತರರಾಗಿ ಕಣದಲ್ಲಿರುವ ನಿಂಗರಾಜು ಎಸ್. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಶಂಕನಪುರ ದವರು. 40 ವರ್ಷ ವಯಸ್ಸಿನ ಅವರು ಬಿಎಸ್ಸಿ, ಬಿಇಡಿ ಹಾಗೂ ದೂರ ಶಿಕ್ಷಣದಲ್ಲಿ ಎಂಎಸ್ಸಿ ಪದವೀಧರ. ಸ್ವಯಂ ಉದ್ಯೋಗ ಕಂಡುಕೊಂಡಿರುವ ಅವರು ಸಾಮಾಜಿಕ ಕಾರ್ಯಕರ್ತ ಎಂದು ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿ ರಾಜು ಕೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರದವರು. 41 ವರ್ಷ ವಯಸ್ಸಿನ ಅವರು ದ್ವಿತೀಯ ಪಿಯು ವಿದ್ಯಾರ್ಹತೆ ಹೊಂದಿದ್ದಾರೆ. ವೃತ್ತಿ ಕೂಲಿ ಎಂದು ತಿಳಿಸಿದ್ದು, ಅದೇ ಆದಾಯದ ಮೂಲ ಎಂದು ಪ್ರಮಾಣಪತ್ರ ನೀಡಿದ್ದಾರೆ.
ಫಲಿತಾಂಶಕ್ಕೆ ಮುನ್ನವೇ ಮತ್ತೊಮ್ಮೆ ಸ್ಪರ್ಧೆ!: ಪಕ್ಷೇತರ ಅಭ್ಯರ್ಥಿ ಎನ್.ಅಂಬರೀಷ್ ಚಾಮರಾಜನಗರ ತಾಲ್ಲೂಕಿನ ದೊಡ್ಡರಾಯಪೇಟೆ ಗ್ರಾಮದವರು. 38 ವರ್ಷದ ಅವರು ಪತ್ರಕರ್ತ ಮತ್ತು ಸಮಾಜಸೇವಕ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಪತ್ರಿಕಾ ವೃತ್ತಿ ಹಾಗೂ ಚಿಲ್ಲರೆ ವ್ಯಾಪಾರ ಆದಾಯದ ಮೂಲ ಎಂದು ಹೇಳಿಕೊಂಡಿದ್ದಾರೆ. ಜೆಒಸಿ ವಿದ್ಯಾರ್ಹತೆಯ ಅವರು, ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಇದರ ನಡುವೆ, ಮತ್ತೊಂದು ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ.
ಕಣದಲ್ಲಿ ಒಟ್ಟು 11 ಮಂದಿ ಹಾಸನ ಜಿಲ್ಲೆಯವರು ಒಬ್ಬರೂ ಇಲ್ಲ ಜೂನ್ 3ರಂದು 4 ಜಿಲ್ಲೆಗಳಲ್ಲೂ ಚುನಾವಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.