ಎಚ್.ಡಿ.ಕೋಟೆ: ‘2025ಕ್ಕೆ ಮೈಸೂರು –ಮಾನಂದವಾಡಿ ಜೋಡಿ ರಸ್ತೆ ₹920 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿದೆ’ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಬಾಬು ಜಗಜೀವನ್ರಾಂ ವಿಚಾರ ವೇದಿಕೆಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ₹2 ಕೋಟಿ ಅನುದಾನ ಹಾಗೂ ಬಾಬು ಜಗಜೀವನರಾಂ ಪ್ರತಿಮೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.
‘ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸುವ ಭವನಗಳನ್ನು ಸಮುದಾಯಗಳಿಗೆ ನಿರ್ವಹಣೆಗೆ ಹಸ್ತಾಂತರಿಸಿಲ್ಲ, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕೊಡಿಸಲು ಪ್ರಯತ್ನಿಸುತ್ತೇನೆ. ಸಮಾಜದ ಅಭಿವೃದ್ಧಿಗೆ ನನ್ನ ಐದು ವರ್ಷದ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆರ್ಥಿಕ ಹಾಗೂ ರಾಜಕೀಯ ಶಕ್ತಿ ನೀಡಬೇಕು. ಸರಗೂರು ತಾಲ್ಲೂಕಿನ ಬಾಬು ಜಗಜೀವನ್ರಾಂ ಸಮುದಾಯ ಭವನದ ನಿವೇಶನವನ್ನು ಉಚಿತವಾಗಿ ಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದರು.
ಬಿಜೆಪಿ ಮುಖಂಡ ಎಂ.ಶಿವಣ್ಣ ಮಾತನಾಡಿದರು. ಬಾಬು ಜಗಜೀವನ್ರಾಂ ವಿಚಾರ ವೇದಿಕೆ ಅಧ್ಯಕ್ಷ ಕೊತ್ತೆಗಾಲ ತಿಮ್ಮಯ್ಯ, ಪರಶಿವಮೂರ್ತಿ, ಶಿವಯ್ಯ, ಶಾಂತಮ್ಮ, ಉಡ ನಾಗರಾಜು, ಪಟೇಲ್ ಸೋಮು, ರೂಪ, ಪ್ರಸಾದ್, ರವೀಶ್, ರಾಜೇಶ್ವರಿ, ಸಣ್ಣತಾಯಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.