ಮೈಸೂರು: ಸರೋದ್ ವಾದಕ ಪಂಡಿತ್ ರಾಜೀವ ತಾರನಾಥ ಅವರು ಇಲ್ಲಿನ ಕುವೆಂಪುನಗರದ ನಿವಾಸದಲ್ಲಿ ಕುಸಿದು ಬಿದ್ದು ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.
‘23 ದಿನಗಳ ಹಿಂದೆ ಬಿದ್ದ ಅವರ ತೊಡೆ ಮೂಳೆ ಮುರಿದಿತ್ತು. ವೈದ್ಯ ಪ್ರಶಾಂತ್ ಶಸ್ತ್ರಚಿಕಿತ್ಸೆ ನಡೆಸಿದ್ದು, ಯಶಸ್ವಿಯಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ಅವರ ಆಪ್ತ, ಲೇಖಕ ಟಿ.ಎಸ್.ವೇಣುಗೋಪಾಲ್ ‘ಪ್ರಜಾವಾಣಿ’ಗೆ ಶುಕ್ರವಾರ ತಿಳಿಸಿದರು.
‘ಎರಡು ದಿನದ ಹಿಂದೆ ಮೂತ್ರಕೋಶದ ಸೋಂಕು ಉಂಟಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವರು ಈಗ ನಿತ್ಯ ಭೇಟಿಯಾಗುವ ಸಂಗೀತಗಾರರು ಹಾಗೂ ಲೇಖಕರೊಂದಿಗೆ ಮಾತನಾಡುತ್ತಿದ್ದಾರೆ’ ಎಂದು ಹೇಳಿದರು.
‘ಗುರುವಾರವಷ್ಟೇ ಪಂಡಿತ್ ವೆಂಕಟೇಶ್ ಕುಮಾರ್ ಬಂದಿದ್ದರು. ಅವರಿಂದ ಹಾಡಿಸಿ, ತಾವೂ ಹಾಡಿದರು. 93 ವರ್ಷವಾದ್ದರಿಂದ ಚೇತರಿಕೆ ನಿಧಾನವಾಗಿದೆ. ಇನ್ನೂ ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಬಿಡುಗಡೆ ಬಗ್ಗೆ ವೈದ್ಯರೇನೂ ಹೇಳಿಲ್ಲ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಬೇಕಿತ್ತು. ಶನಿವಾರ ಬರುವೆನೆಂದು ಹೇಳಿದ್ದಾರೆ’ ಎಂದರು.