ಮೈಸೂರು: 13 ಕೇಂದ್ರಗಳಲ್ಲಿ ಮಂಗಳವಾರ ಪಿಯು ಪೂರಕ ಪರೀಕ್ಷೆಯು ಆರಂಭವಾಗಿದ್ದು, ನೋಂದಾಯಿಸಿದ್ದ 1,928 ಅಭ್ಯರ್ಥಿಗಳಲ್ಲಿ ಕನ್ನಡ ಭಾಷಾ ಪರೀಕ್ಷೆಗೆ 128 ಮಂದಿ ಗೈರಾದರು.
ದಾಖಲಾತಿ ಪ್ರಮಾಣ ಶೇ 90.9ರಷ್ಟಿತ್ತು. ಯಾವುದೇ ಅಕ್ರಮ ನಡೆಯಲಿಲ್ಲ. ಎಚ್.ಡಿ.ಕೋಟೆ, ಹುಣಸೂರು, ನಂಜನಗೂಡು, ಕೆ.ಆರ್.ನಗರ, ತಿ.ನರಸೀಪುರ, ಪಿರಿಯಾಪಟ್ಟಣದಲ್ಲಿ ತಲಾ ಒಂದು ಕೇಂದ್ರವಿದ್ದರೆ, ಮೈಸೂರು ನಗರದಲ್ಲಿ 7 ಕೇಂದ್ರಗಳು ಇದ್ದವು.
ಮೊದಲ ದಿನ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.15ರವರೆಗೆ ಪರೀಕ್ಷೆ ನಡೆಯಿತು. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಡಿಡಿಪಿಯು, ಜಾಗೃತ ದಳ ಸಿಬ್ಬಂದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಪರೀಕ್ಷೆ ಸುಗಮವಾಗಿ ನಡೆದಿದೆ. ಮೊದಲ ದಿನ 1,800 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಬುಧವಾರ ರಸಾಯನವಿಜ್ಞಾನ ಪರೀಕ್ಷೆ ಇದ್ದು, ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಂ.ಪಿ.ನಾಗಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್, ಕೈ ಗಡಿಯಾರ, ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವುದಕ್ಕೂ ನಿಷೇಧವಿದೆ. ಸುಗಮ ಪರೀಕ್ಷೆಗಾಗಿ ಇಲಾಖೆಯ ಜಾಗೃತದಳಗಳು ಕಾರ್ಯನಿರ್ವಹಿಸಲಿವೆ’ ಎಂದು ಮಾಹಿತಿ ನೀಡಿದರು.