ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡಕಟ್ಟು ಅಭಿವೃದ್ಧಿ ವರದಿ ಸಿದ್ಧ: ಕೇರಳ ನಂತರ ಕರ್ನಾಟಕದಲ್ಲಿ ನಡೆದಿರುವ ಸಮೀಕ್ಷೆ

Published 3 ಜನವರಿ 2024, 7:15 IST
Last Updated 3 ಜನವರಿ 2024, 7:15 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ಅಧ್ಯಯನ ಕೇಂದ್ರದ ಸಂಶೋಧನಾ ತಂಡವು ತಯಾರಿಸಿರುವ ರಾಜ್ಯದ ಮೊದಲ ‘ಬುಡಕಟ್ಟು ಮಾನವ ಅಭಿವೃದ್ಧಿ ವರದಿ’ ಸಿದ್ಧವಾಗಿದೆ.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಪ್ರಾಯೋಜಕತ್ವದಲ್ಲಿ 2021ರಿಂದ 2023ರವರೆಗೆ ಸಮೀಕ್ಷೆ ನಡೆಸಲಾಗಿದೆ. ಇದಕ್ಕಾಗಿ ಸಚಿವಾಲಯದಿಂದ ₹30 ಲಕ್ಷ ಆರ್ಥಿಕ ನೆರವು ದೊರೆತಿತ್ತು. ಕೇಂದ್ರದ ಸಹ ಪ್ರಾಧ್ಯಾಪಕ ಡಿ.ಸಿ.ನಂಜುಂಡ ಮತ್ತು ಮಂಡ್ಯ ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೇಮಕುಮಾರ್‌ ಜಿ.ಎಸ್. ನೇತೃತ್ವದ ತಂಡ ವರದಿ ಸಿದ್ಧಪಡಿಸಿದೆ.

2010ರಲ್ಲಿ ಕೇರಳ ಸರ್ಕಾರ ಇಂಥದೊಂದು ವರದಿ ತಯಾರಿಸಿತ್ತು. ಇದೀಗ, ರಾಜ್ಯದ್ದು ದೇಶದ 2ನೇ ಬುಡಕಟ್ಟು ಸಮುದಾಯದ ಮಾನವ ಅಭಿವೃದ್ಧಿ ವರದಿ ಎನಿಸಲಿದೆ. ಇದನ್ನು ಶೀಘ್ರದಲ್ಲೇ ಬಿಡುಗಡೆಗೆ ಯೋಜಿಸಲಾಗಿದೆ.

ತಂಡವು ರಾಜ್ಯದ 50 ಬುಡಕಟ್ಟು ಸಮುದಾಯಗಳ 5 ಸಾವಿರಕ್ಕೂ ಹೆಚ್ಚಿನ ಜನರನ್ನು ಭೇಟಿಯಾಗಿ ದತ್ತಾಂಶ ಸಂಗ್ರಹಿಸಿದೆ. ವರದಿಯ ಕರಡು ಪ್ರತಿಯನ್ನು ಕೇಂದ್ರ ಬುಡಕಟ್ಟು ಸಚಿವಾಲಯವು ತಾತ್ವಿಕವಾಗಿ ಒಪ್ಪಿದೆ ಎಂದು ಮೂಲಗಳು ತಿಳಿಸಿವೆ.

ಹಲವು ವಿಷಯ ಆಧರಿಸಿ: ಬುಡಕಟ್ಟು ಸಮುದಾಯದ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗದ (ಜೀವನೋ‍ಪಾಯ) ಸ್ಥಿತಿಗತಿಗೆ ಆದ್ಯತೆ ನೀಡಿದೆ. ಸಚಿವಾಲಯದ ಕೋರಿಕೆಯಂತೆ ಲಿಂಗ, ಭಾಗವಹಿಸುವಿಕೆ, ಹೊರಗುಳಿಯವಿಕೆ ಮೊದಲಾದ ಅಂಶಗಳ ಆಧಾರದ ಮೇಲೂ ಸಮೀಕ್ಷೆ ನಡೆದಿದೆ. 

ಸಾಂಪ್ರದಾಯಿಕ ವರದಿಗಳಲ್ಲಿ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗದ ಸ್ಥಿತಿಗತಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಆದರೆ, ಈ ಸಮೀಕ್ಷೆಯಲ್ಲಿ ಲಿಂಗ, ಭಾಗವಹಿಸುವಿಕೆ, ಹೊರಗುಳಿಯವಿಕೆಯಂತಹ ವಿಷಯಗಳಿಗೆ ವಿಶೇಷ ಆದ್ಯತೆ ಕೊಡಲಾಗಿದೆ. ಈ ವಿಷಯಗಳಲ್ಲಿ ಬುಡಕಟ್ಟು ಜನರು ಬಹಳ ಹಿಂದುಳಿದಿರುವುದನ್ನು ಗುರುತಿಸಲಾಗಿದೆ.

‘ರಾಜ್ಯದಲ್ಲಿರುವ 50 ಬುಡಕಟ್ಟುಗಳಲ್ಲಿ 20 ಸೂಕ್ಷ್ಮ ಬುಡಕಟ್ಟು ಸಮುದಾಯಗಳು ಪತ್ತೆಯಾಗಿಲ್ಲದೇ ಇರುವುದು ಸಮೀಕ್ಷೆಯಲ್ಲಿ ಕಂಡುಬಂದಿದ್ದು, ಈ ಬಗ್ಗೆ ಜಿಲ್ಲಾಡಳಿತಗಳು ಗಮನಹರಿಸಬೇಕಾಗಿದೆ‘ ಎನ್ನುತ್ತಾರೆ ನಂಜುಂಡ.

‘ಸಾಂಪ್ರದಾಯಿಕವಾಗಿ ಮಾನವ ಅಭಿವೃದ್ಧಿ ವರದಿಗಳನ್ನು ಅನುಸಂಘಿಕ (ಸೆಕೆಂಡರಿ) ದಾಖಲೆ ಆಧರಿಸಿ ಮಾಡಲಾಗುತ್ತದೆ. ನಾವು ಕ್ಷೇತ್ರ ಕಾರ್ಯದ ಪ್ರಾಥಮಿಕ ದತ್ತಾಂಶಗಳನ್ನು ಆಧರಿಸಿ ವರದಿ ರೂಪಿಸಿದ್ದೇವೆ’ ಎಂದು ಸಹ ಸಂಶೋಧಕ ಪ್ರೊ.ಪ್ರೇಮಕುಮಾರ್‌ ಹೇಳುತ್ತಾರೆ.

‘ಅಂತರ ದೊಡ್ಡದಾಗಿದೆ...’

ಗ್ರಾಮೀಣ ಹಾಗೂ ಅರಣ್ಯದಲ್ಲಿ ವಾಸಿಸುವ ಬುಡಕಟ್ಟು ಜನರ ಮಾನವ ಅಭಿವೃದ್ಧಿಯ ಅಂತರ ಮತ್ತಷ್ಟು ದೊಡ್ಡದಾಗಿರುವುದನ್ನು ಗುರುತಿಸಲಾಗಿದೆ. ಅರಣ್ಯವಾಸಿಗಳಾದ ಸೋಲಿಗ ಕೊರಗ ಬೆಟ್ಟಕುರುಬು ಕಾಡುಕುರುಬ ಪಣಿಯ ಜೇನುಕುರುಬ ಇರುಳಿಗ ಮೊದಲಾದ 12 ಬುಡಕಟ್ಟುಗಳ ಜನರನ್ನು ಅವರ ವಾಸಸ್ಥಳಕ್ಕೇ ಹೋಗಿ ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗಿದೆ. ಈಗಲೂ ಬಹಳಷ್ಟು ಮಂದಿಗೆ ಮತದಾರರ ಗುರುತಿನ ಚೀಟಿ ದೊರೆತಿಲ್ಲ. ಚುನಾವಣೆಯಲ್ಲಿ ಪ್ರತಿನಿಧಿಸುವುದಕ್ಕೆ ಅವಕಾಶ ಸಿಕ್ಕಿಲ್ಲ. ಸರ್ಕಾರ ಯೋಜನೆಗಳು ಎಲ್ಲರಿಗೂ ತಲುಪಿಲ್ಲ ಎಂಬುದು ತಿಳಿದುಬಂದಿದೆ. ಉದ್ಯೋಗ ಪಡೆದುಕೊಳ್ಳುವಲ್ಲಿ ಅವರು ಬಹಳ ಹಿಂದುಳಿದಿದ್ದಾರೆ. ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿರುವುದು ಕಂಡುಬಂದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ವರದಿಯನ್ನು ಕೇಂದ್ರ ಸರ್ಕಾರ ಈಚೆಗೆ ಅಂಗೀಕರಿಸಿದ್ದು ಸಚಿವರ ಮೂಲಕ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿಸಲು ಯೋಜಿಸಲಾಗಿದೆ.
-ಡಿ.ಸಿ.ನಂಜುಂಡ ಸಹ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT