ಮೈಸೂರು: ಕೊರೊನಾ ಸೋಂಕು ಪರಿಸ್ಥಿತಿ ಕಾರಣ ತೊಂದರೆಗೆ ಒಳಗಾಗಿರುವ ನಿರ್ಗತಿಕರು, ಕಾರ್ಮಿಕರು, ವಲಸಿಗರು ಹಾಗೂ ದಿನಗೂಲಿ ನೌಕರರಿಗೆ ಸುತ್ತೂರು ಮಠದಿಂದ ದಾಸೋಹ ವ್ಯವಸ್ಥೆ ಮಾಡಲಾಗಿದೆ.
ಮೈಸೂರು ನಗರದಲ್ಲಿ ಮೂರು ದಿನಗಳಿಂದ ಈ ಸೇವೆ ನಡೆಯುತ್ತಿದ್ದು, ನಿತ್ಯ ಸುಮಾರು ಎರಡು ಸಾವಿರ ಮಂದಿಗೆ ಆಹಾರ ವಿತರಿಸಲಾಗುತ್ತಿದೆ.
ದಾಸೋಹಕ್ಕೆ ಹೆಬ್ಬಾಳು, ಕುಂಬಾರ ಕೊಪ್ಪಲು, ಮೇಟಗಳ್ಳಿ, ಬಿಎಂಶ್ರೀ ನಗರ, ಎಫ್ಟಿಎಸ್ ವೃತ್ತದ ಬಳಿಯ ಸರ್ಕಾರಿ ಶಾಲೆಗಳು, ಚೌಲ್ಟ್ರಿಗಳಲ್ಲಿ ಸ್ಥಳ ನಿಗದಿ ಮಾಡಲಾಗಿದೆ. ಈ ಭಾಗದಲ್ಲಿ ಹೆಚ್ಚು ಮಂದಿ ನಿರ್ಗತಿಕರು ಹಾಗೂ ವಲಸಿಗರು ನೆಲೆಸಿದ್ದಾರೆ.
‘ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೂಚನೆ ಮೇರೆಗೆ ಪ್ರಸಾದ ವಿತರಣಾ ಸೇವೆ ಮಾಡುತ್ತಿದ್ದೇವೆ. ಆಹಾರವನ್ನು ಪೊಟ್ಟಣಗಳಲ್ಲಿ ಹಾಕಿ ಪೂರೈಸುತ್ತಿದ್ದೇವೆ. ಪಲಾವ್, ವಾಂಗೀಬಾತ್, ಚಿತ್ರಾನ್ನ, ಟೊಮೆಟೊ ಬಾತ್... ಹೀಗೆ, ನಿತ್ಯ ಒಂದೊಂದು ರೀತಿಯ ತಿಂಡಿ ನೀಡುತ್ತಿದ್ದೇವೆ’ ಎಂದು ಮಠದ ಅಧಿಕಾರಿ ಗೌರಿಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಜೆ.ಪಿ.ನಗರದಲ್ಲಿರುವ ಜೆಎಸ್ಎಸ್ ಶಾಲೆಯಲ್ಲಿ ಆಹಾರ ತಯಾರಿಸಿ ಈ ಸ್ಥಳಗಳಲ್ಲಿ ಹಂಚಲಾಗುತ್ತಿದೆ. 10 ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿದ್ದು, ವಾಹನದಲ್ಲಿ ವಿವಿಧ ಸ್ಥಳಗಳಿಗೆ ಆಹಾರ ಸಾಗಿಸಲಾಗುತ್ತಿದೆ.
‘ಗುಂಪು ಕಡಿಮೆ ಮಾಡಲು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಹಾರ ವಿತರಿಸಲಾಗುತ್ತಿದೆ. ಲಾಕ್ಡೌನ್ ಕೊನೆಯಾಗುವವರೆಗೆ ಈ ಕಾರ್ಯಕ್ರಮ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ಅಗತ್ಯವಿರುವ ಇತರ ಬಡಾವಣೆಗಳಿಗೂ ವಿಸ್ತರಿಸಲಾಗುವುದು’ ಎಂದು ಹೇಳಿದರು.