ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ವಿಜೃಂಭಣೆಯ ಸುತ್ತೂರು ಶಿವರಾತ್ರೀಶ್ವರ ರಥೋತ್ಸವ

Published 8 ಫೆಬ್ರುವರಿ 2024, 6:54 IST
Last Updated 8 ಫೆಬ್ರುವರಿ 2024, 6:54 IST
ಅಕ್ಷರ ಗಾತ್ರ

ಸುತ್ತೂರು (ಮೈಸೂರು ಜಿಲ್ಲೆ): ಅಪಾರ ಭಕ್ತರ ಮುಗಿಲು ಮುಟ್ಟಿದ ಜಯಘೋಷಗಳೊಂದಿಗೆ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವ ಗುರುವಾರ ಬೆಳಿಗ್ಗೆ ಅದ್ದೂರಿಯಾಗಿ ನೆರವೇರಿತು‌.

ಗ್ರಾಮದ ಕತೃಗದ್ದುಗೆ ಆವರಣದಲ್ಲಿ ಜಮಾಯಿಸಿದ್ದ ಭಕ್ತರು ಹೆಬ್ಬಾವಿನ ಗಾತ್ರದ ರಥದ ಮಿಣಿಯನ್ನು ಎಳೆದು ಹರಕೆ‌ ತೀರಿಸಿದರು. ರಥಕ್ಕೆ ಹಣ್ಣು-ಜವನ ಎಸೆದು ನಮಿಸಿದರು. ಹರಕೆ ಕಾರ್ಯ ನೆರವೇರಿಸಿದ ಸಂತೃಪ್ತಿ ಅವರಲ್ಲಿ ಮೂಡಿತ್ತು.

ಬೆಳಿಗ್ಗೆ 4ಕ್ಕೆ ಕರ್ತೃ ಗದ್ದುಗೆಯನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. 6 ಗಂಟೆಗೆ ಮಠದ ಗುರು ಪರಂ‍ಪರೆಯ ಸಂಸ್ಮರಣೋತ್ಸವ ಹಾಗೂ ಗದ್ದುಗೆಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಬೆಳಿಗ್ಗೆ 9ಕ್ಕೆ ಉತ್ಸವ ಮೂರ್ತಿಗೆ ರಾಜೋಪಚಾರ ನಡೆಯಿತು. 10.30 ಗಂಟೆಗೆ ಶಿವಯೋಗಿಗಳ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಅರ್ಚಕರು ಪೂಜಾ ವಿಧಿವಿಧಾನ ಪೂರೈಸಿದರು.

ಬೆಳಿಗ್ಗೆ 10.55ಕ್ಕೆ ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೈ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವ ಮಂಕಾಳ ಎಸ್. ವೈದ್ಯ, ಬಿ.ಎಸ್.ಯಡಿಯೂರಪ್ಪ, ಮುರುಗೇಶ್ ನಿರಾಣಿ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ರಥದ ಮಿಣಿ ಎಳೆದು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ 21 ಕುಶಾಲತೋಪುಗಳು ಸಿಡಿದವು. ಭಕ್ತರ ಜಯಘೋಷ ಮುಗಿಲುಮುಟ್ಟಿತ್ತು.

ರಥದ ಮಿಣಿಯನ್ನು ಹಿಡಿದ ಭಕ್ತರು ಮಠದ ಗುರು ಪರಂಪರೆಗೆ ಜಯಕಾರ ಹಾಕುತ್ತಾ ಎಳೆಯುತ್ತಿದ್ದರೆ ರಾಜಠೀವಿಯಲ್ಲಿ ರಥವು ಸಾಗಿತು. ಜಾನಪದ ಕಲಾತಂಡಗಳೊಂದಿಗೆ ಪುಷ್ಪಾಲಂಕೃತ ರಥವು ಕ್ರಮಿಸಿತು. ತಮಟೆ, ನಗಾರಿ ವಾದ್ಯಗಳ ನಾದ ಮುಗಿಲುಮುಟ್ಟಿತು.

ಮುಂದೆ ಸಾಗುತ್ತಿದ್ದ ಚಿಕ್ಕತೇರಿಗೂ ಭಕ್ತವೃಂದ ಕೈ ಮುಗಿಯಿತು. ಸುತ್ತೂರು ಮೂಲಮಠದವರೆಗೂ ಭಕ್ತರು ರಥದೊಂದಿಗೆ ಹೆಜ್ಜೆ ಹಾಕಿದರು. ದೊಡ್ಡಮ್ಮತಾಯಿ ದೇವಸ್ಥಾನದ ವೃತ್ತ ಬಳಸಿ ಕತೃಗದ್ದುಗೆಗೆ ಮರಳಿತು.

ಗಮನಸೆಳೆದ ಕಲಾತಂಡಗಳು: ರಥೋತ್ಸವದ ಮೆರವಣಿಗೆಯಲ್ಲಿ ಸಾಗಿದ 35 ಕಲಾತಂಡಗಳು ಶಿಸ್ತಿನಲ್ಲಿ ಹೆಜ್ಜೆ ಹಾಕಿದ್ದಲ್ಲದೇ ದಸರಾ ಜಂಬೂಸವಾರಿಯನ್ನು ನೆನಪಿಸಿದವು.

ನಂದಿಧ್ವಜ ಕುಣಿತ ರಥದ ಮುಂಭಾಗವಿತ್ತು. ನಗಾರಿಯ ಸದ್ದಿಗೆ ಕಂಬದ ಗೆಜ್ಜೆಗಳನ್ನು ಝಲ್ಲೆನೆಸುತ್ತಾ ಹೆಜ್ಜೆ ಹಾಕಿದ ಕಲಾವಿದರು, ರಥೋತ್ಸವದ ಮೆರವಣಿಗೆಗೆ ಮುನ್ನುಡಿ ಬರೆದರು‌. ವೀರಭದ್ರನ ವೇಷದಲ್ಲಿದ್ದ ಗಂಗವಾಡಿ ಶಿವರುದ್ರಸ್ವಾಮಿ, ನಾಗಮಂಗಲದ ಮಹದೇವಪ್ಪ, ಕಿರಾಳು ಮಹೇಶ್ ನೇತೃತ್ವದ ಲಿಂಗಧೀರರ ನೃತ್ಯ ನೋಡಿ ಬೆಚ್ಚಿದ ಮಕ್ಕಳು ಪೋಷಕರನ್ನು ತಬ್ಬಿದರು.

ನಾದಸ್ವರದಲ್ಲಿ ನವಿಲೂರಿನ ಚಿಕ್ಕಣ್ಣ ನೇತೃತ್ವದಲ್ಲಿ 5 ಮಂದಿ ಕಲಾವಿದರು ಭಾಗಿಯಾದರು. ತವಿಲ್ ನ ಲಯ, ನಾದಸ್ವರದ ನಾದದ ಅಲೆ ಕಿವಿದುಂಬಿತ್ತು. ಕೆ.ಆರ್.ಪೇಟೆ ಪ್ರಸನ್ನಕುಮಾರ್ ನೇತೃತ್ವದ ನಾಲ್ವರು ಕಲಾವಿದರಿಂದ ಹೊರಹೊಮ್ಮುತ್ತಿದ್ದ ಸ್ಯಾಕ್ಸೋಪೋನ್‌ ವಾದನವು ಮೋಡಿ ಮಾಡಿತು. ಸುತ್ತೂರು ಉಚಿತ ಶಾಲೆಯ ಮಕ್ಕಳು ವೀರಗಾಸೆ ಪ್ರದರ್ಶಿಸಿದರು.

ಯಡಹಳ್ಳಿಯ ಪ್ರಕಾಶ್, ಬೀಡನಹಳ್ಳಿಯ ಶಿವು, ಮೈಸೂರು ಮೋಹನ್ ಅವರ ಪೂಜಾಕುಣಿತ, ನಂಜನಗೂಡಿನ ಮಹೇಶ್ ಅವರ ಗಾರುಡಿ ಗೊಂಬೆಗಳು ಎಲ್ಲರನ್ನು ಸೆಳೆದವು. ಶಿವಮೊಗ್ಗದ ಗಣೇಶ್, ಬೆಂಡೆಕಟ್ಟೆ ಮಹೇಶ್, ಪಾಂಡವಪುರದ ಶಿವಕುಮಾರ್ ಅವರ ಡೊಳ್ಳು ಕುಣಿತದ ಸದ್ದು ಧಿಮಿಧಿಮಿಸಿತು.

ಮೈಸೂರಿನ ಚಿನ್ನ, ನಾಗೇಶ ಅವರ ತಮಟೆ-ನಗಾರಿಯ ಗುಂಗಿಗೆ ಭಕ್ತರು ಹೆಜ್ಜೆ ಹಾಕಿದರು. ರಾಮಸಮುದ್ರದ ರಾಜು ಅವರ ಗೊರವರ ಕುಣಿತ, ತಳಗವಾಡಿಯ ಹೊನ್ನಯ್ಯ ತಂಡದ ಕೋಲಾಟ ಆಕರ್ಷಿಸಿದವು.

ಶಿವಮೊಗ್ಗದ ಯುವರಾಜ್ ಅವರ ಜಾಂಜ್ ಮೇಳ, ಚಾಮುಂಡಿ ವೇಷದಲ್ಲಿದ್ದ ತಾಯೂರಿನ ಸಿದ್ದರಾಜು ಅವರ ಮರಗಾಲು ಸೂಜಿಗಲ್ಲಿನಂತೆ ಸೆಳೆಯಿತು.

ಮೈಸೂರಿನ ರವಿಚಂದ್ರ, ಕೆಂಪಿಸಿದ್ದನಹುಂಡಿಯ ಮಹದೇವು ಅವರ ಕಂಸಾಳೆ, ಕೆ.ಆರ್.ನಗರದ ಎ.ಪಿ.ಕೃಷ್ಣೇಗೌಡ ತಂಡದ ಹುಲಿವೇಷ, ಸುಂಕಾತೊಣ್ಣೂರಿನ ಕೃಷ್ಣೇಗೌಡ ತಂಡದ ಪಟದ ಕುಣಿತ, ಧಾರವಾಡದ ಚನ್ನಯ್ಯ ಕಡ್ಲಿಮಠ್ ತಂಡದ ದೊಣ್ಣೆವರಸೆ, ಸುತ್ತೂರು ಗ್ರಾಮದವರ ವೀರಮಕ್ಕಳಕುಣಿತ ಮೋಡಿ ಮಾಡಿತು.

ರಾಜ್ಯದ ಜಾನಪದ ಕಲಾತಂಡಗಳಲ್ಲದೇ ಮಹಾರಾಷ್ಟ್ರದ ಎಂ.ಆರ್.ಪಾಟೀಲ ತಂಡದ ಜಾನಪಥಕ್, ತಮಿಳುನಾಡಿನ ಮುರುಗನ್ ತಂಡದ ಕೋಲಾಟಂ, ಕರಗಟ್ಟಂ, ಕಾವಾಡಿಯಾಟಂ ಆಕರ್ಷಿಸಿದವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT