ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ‘ತಂತ್ರಜ್ಞಾನ: ಹೊರೆಯಾದ ಮಾಹಿತಿ ಕಣಜ’

ದಾಖಲೀಕರಣ ಸಂಶೋಧನೆ ಹಾಗೂ ತರಬೇತಿ ಸಂಸ್ಥೆಯ ಪ್ರೊ.ಕೆ.ಎಸ್‌.ರಾಘವನ್ ಅಭಿಮತ
Last Updated 25 ಫೆಬ್ರುವರಿ 2023, 4:59 IST
ಅಕ್ಷರ ಗಾತ್ರ

ಮೈಸೂರು: ‘ತಂತ್ರಜ್ಞಾನದ ಕಾರಣ ಮಾಹಿತಿಯು ವಿಫುಲ ಹಾಗೂ ಸುಲಭವಾಗಿ ದೊರೆಯುತ್ತಿದ್ದು, ಮಾಹಿತಿ ಕಣಜವು ಹೊರೆಯಾಗಿ ಪರಿಣಮಿಸಿದೆ’ ಎಂದು ದಾಖಲೀಕರಣ ಸಂಶೋಧನೆ ಹಾಗೂ ತರಬೇತಿ ಸಂಸ್ಥೆಯ ಪ್ರೊ.ಕೆ.ಎಸ್‌.ರಾಘವನ್ ಹೇಳಿದರು.

ಮಾನಸಗಂಗೋತ್ರಿಯ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗವು ‘ಡಿಜಿಟಲ್‌ ಗ್ರಂಥಾಲಯ’ ಕುರಿತು ಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾಹಿತಿಯು ಲಭ್ಯತೆಯು ಪುಸ್ತಕದಿಂದ ಬಹುಮಾಧ್ಯಮ ಡಿಜಿಟಲ್ ಸಂಪನ್ಮೂಲದ ಕಡೆಗೆ ಹೊರಳಿದೆ. ಪಾರಂಪರಿಕ ಅಧ್ಯಯನ ಮಾರ್ಗದಿಂದ ಸ್ಮಾರ್ಟ್‌ ಯುಗಕ್ಕೆ ಈಗಿನ ಯುವ ಸಮುದಾಯ ಬಂದಿದೆ. ಆದರೆ, ಜ್ಞಾನವು ಸುಲಭವಾಗಿ ಸಿಗುತ್ತಿದ್ದರೂ, ಮೂಲಗಳು ಹೆಚ್ಚಾಗಿರುವುದು ಹೊರೆಯಾಗಿಸಿದೆ’ ಎಂದು ಅಭಿಪ್ರಾಯಪಟ್ಟರು.

‘ಗ್ರಂಥಾಲಯಗಳಲ್ಲಿ ಕೆಲಸ ಮಾಡುವವರು ಬಹುಮಾಧ್ಯಮದಲ್ಲಿಯೇ ಸಾಧ್ಯತೆಯನ್ನು ಹುಡುಕಬೇಕು. ಸುದ್ದಿಮಾಧ್ಯಮಗಳು ಆಧುನೀಕರಣಗೊಂಡಂತೆಯೇ ಗ್ರಂಥಾಲಯಗಳು ಡಿಜಿಟಲ್‌, ಬಹುಮಾಧ್ಯಮಗಳನ್ನು ಬಳಸಿಕೊಳ್ಳಬೇಕಿದೆ’ ಎಂದರು.

ಹಂಗಾಮಿ ಕುಲಪತಿ ಪ್ರೊ.ಮುಜಾಫರ್ ಅಸ್ಸಾದಿ ಮಾತನಾಡಿ, ‘ಜ್ಞಾನದ ಮೂಲ ವಿಸ್ತರಣೆಯಾಗಿದ್ದು, ಪ್ರತಿಯೊಬ್ಬರಿಗೆ ಸುಲಭವಾಗಿ ದಕ್ಕುವಂತೆ ಮಾಡಿದೆ. ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಕೋಲೆಗಳು, ಎಲ್ಲ ಗಡಿಗಳನ್ನು ಮೀರುವ ಸ್ವಾತಂತ್ರ್ಯವನ್ನು ತಂತ್ರಜ್ಞಾನ ನೀಡಿದೆ’ ಎಂದರು.

‘ಜ್ಞಾನವು ಕೆಲವರ ಸ್ವತ್ತಾಗಿ ಇಂದು ಉಳಿದಿಲ್ಲ. ಶ್ರೇಣೀಕರಣದ ಸಮಾಜವನ್ನು ಒಡೆದು ಸಮಸಮಾಜದ ನಿರ್ಮಾಣಕ್ಕೆ ತಂತ್ರಜ್ಞಾನ ತೆರೆದುಕೊಟ್ಟಿದೆ. ಮಾಹಿತಿಯ ಮೂಲಗಳನ್ನು ಸುಲಭವಾಗಿ ಹುಡುಕಬಹುದಾಗಿದೆ’ ಎಂದರು.

‘ಅಂತರ್ಜಾಲ ಯುಗವು ಸಾಂಸ್ಕೃತಿಕ ಪಲ್ಲಟಕ್ಕೆ ಕಾರಣವಾಗಿದೆ. ಕಾಲ– ದೇಶವನ್ನು ಮೀರುವಂತಹ ಜ್ಞಾನ ಸೃಷ್ಟಿಸುವ ಅವಕಾಶ ನೀಡಿದೆ. ಎಲ್ಲರನ್ನು ತಲುಪುವ ಮಾರ್ಗವನ್ನು ಹುಡುಕಿಕೊಟ್ಟಿದೆ’ ಎಂದು ತಿಳಿಸಿದರು.

ವಿಭಾಗದ ಮುಖ್ಯಸ್ಥ ಪ್ರೊ.ಎನ್‌.ಎಸ್‌.ಹರಿನಾರಾಯಣ, ಡಾ.ಎಂ.ಎ.ಶ್ರೀಧರ್‌, ಇನ್ಫೊರ್ಮೆಟಿಕ್ಸ್‌ ಇಂಡಿಯಾ ಲಿಮಿಟೆಡ್‌ನ ಎನ್‌.ವಿ.ಸತ್ಯನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT